ತ್ರಿಶೂರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇರಳದ ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ನ ರಾಮಸ್ವಾಮಿ ದೇವಾಲಯಕ್ಕೆ ಇಂದು (ಬುಧವಾರ) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ನಟ ಹಾಗೂ ರಾಜಕಾರಣಿಯೂ ಆಗಿರುವ ಸುರೇಶ್ ಗೋಪಿ ಅವರ ಮಗಳ ಮದುವೆ ಕಾರ್ಯಕ್ರಮವು ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇವಾಲಯದಲ್ಲಿ ನಡೆಯಿತು. ಈ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರು ಸಾಕ್ಷಿಯಾದರು. ಬಳಿಕ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನಕ್ಕೆ ತೆರಳುವ ಮಾರ್ಗದುದ್ದಕ್ಕೂ, ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಜನರು ಮೋದಿಯನ್ನು ಪುಷ್ಪ ವೃಷ್ಟಿಯ ಮೂಲಕ ಸ್ವಾಗತಿಸಿದರು.
ಧೋತಿ ಹಾಗೂ ಬಿಳಿ ಶಾಲು ಧರಿಸಿ ಮಿಂಚಿದ ಮೋದಿ:
ತ್ರಿಪ್ರಯಾರ್ನ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮೋದಿ, ಸಾಂಪ್ರದಾಯಿಕ ಉಡುಗೆಯಾದ ಧೋತಿ ಮತ್ತು ಹಾಗೂ ಬಿಳಿ ಶಾಲು ಧರಿಸಿ ಮಿಂಚಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಮಕ್ಕಳಿಂದ ನಡೆದ ‘ವೇದ ಅರ್ಚನೆ’ ಹಾಗೂ ‘ಭಜನೆ’ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡರು. ಒಂದು ಗಂಟೆಗೂ ಹೆಚ್ಚು ಸಮಯವನ್ನು ಮೋದಿ ದೇವಸ್ಥಾನದಲ್ಲಿ ಕಳೆದರು.
ತ್ರಿಪ್ರಯಾರ್ ದೇವಾಲಯದಲ್ಲಿ ನೆಲೆಸಿರುವ ಭಗವಾನ್ ರಾಮಸ್ವಾಮಿ, ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಕೇರಳದ ರಾಮಸ್ವಾಮಿ ದೇವಾಲಯಕ್ಕೆ ಮೋದಿ ಭೇಟಿ ನೀಡಿರುವುದು ವಿಶೇಷವೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.