ADVERTISEMENT

ಮೀಸಲಾತಿ ಕುರಿತ ರಾಹುಲ್ ಗಾಂಧಿ ಹೇಳಿಕೆ: ಸಂವಿಧಾನ ವಿರೋಧಿ ಮನಸ್ಥಿತಿ ಎಂದ ಧನ್‌ಕರ್

ಪಿಟಿಐ
Published 15 ಸೆಪ್ಟೆಂಬರ್ 2024, 13:02 IST
Last Updated 15 ಸೆಪ್ಟೆಂಬರ್ 2024, 13:02 IST
<div class="paragraphs"><p>ಜಗದೀಪ್‌ ಧನ್‌ಕರ್</p></div>

ಜಗದೀಪ್‌ ಧನ್‌ಕರ್

   

ಮುಂಬೈ: ‘ಮೀಸಲಾತಿ ಕುರಿತ ಹೇಳಿಕೆಗೆ ರಾಹುಲ್‌ ಗಾಂಧಿ ಅವರನ್ನು ಟೀಕಿಸಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್, ‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಇಂತಹ ನಿಲುವು ಅವರ ಸಂವಿಧಾನ ವಿರೋಧಿ ಮನಃಸ್ಥಿತಿ ತೋರಿಸುತ್ತದೆ’ ಎಂದಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಧನ್‌ಕರ್ ಅವರು, ‘ಭಾರತದ ಸಂವಿಧಾನದ ಆತ್ಮವನ್ನೇ ಕೆಲವರು ಮರೆತಿರುವ ಈ ಹೊತ್ತಿನಲ್ಲಿ,  ಅದರ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ’  ಎಂದು ಪ್ರತಿಪಾದಿಸಿದರು.  

ADVERTISEMENT

‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ವಿದೇಶಿ ನೆಲದಲ್ಲಿ ನಿಂತು ಮೀಸಲಾತಿ ಸೌಲಭ್ಯವು ಅಂತ್ಯವಾಗಬೇಕು ಎಂದು ಹೇಳುತ್ತಾರೆ. ಮೀಸಲಾತಿಯನ್ನು ಕುರಿತ ಪೂರ್ವಾಗ್ರಹ ಪೀಡಿತ ಧೋರಣೆಯು ಹೊಸ ಪೀಳಿಗೆಗೂ ವ್ಯಾಪಿಸಿದಂತಿದೆ’ ಎಂದು ಪರೋಕ್ಷವಾಗಿ ರಾಹುಲ್ ವಿರುದ್ಧ ಹರಿಹಾಯ್ದರು.

‘ಮೀಸಲಾತಿ ಮೆರಿಟ್ ವಿರುದ್ಧ ಅಲ್ಲ; ಅದು, ದೇಶ ಮತ್ತು ಸಂವಿಧಾನದ ಆತ್ಮ. ನಕಾರಾತ್ಮಕ ಕ್ರಿಯೆಯಲ್ಲ, ಬದ್ಧತೆ’ ಎಂದು ಧನ್‌ಕರ್ ವ್ಯಾಖ್ಯಾನಿಸಿದರು. 

ಇತ್ತೀಚೆಗೆ ಅಮೆರಿಕ ಪ್ರವಾಸದ ಅವಧಿಯಲ್ಲಿ ರಾಹುಲ್‌ಗಾಂಧಿ ಅವರು, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದಾಗಿ ವರದಿಯಾಗಿತ್ತು. 

ನಂತರದ ಮಾಧ್ಯಮ ಸಂವಾದದಲ್ಲಿ, ‘ನಾನು ಮೀಸಲಾತಿಗೆ ವಿರುದ್ಧವಾಗಿ ಇದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದರು.

‘ಸಂವಿಧಾನವನ್ನು ಗೌರವಿಸುವ ಯಾರೊಬ್ಬರೂ ರಾಹುಲ್‌ ಗಾಂಧಿ ಅವರ ನಡೆಯನ್ನು ಒಪ್ಪುವುದಿಲ್ಲ’ ಎಂದು ಧನ್‌ಕರ್ ಟೀಕಿಸಿದರು. 

ಶೇ 50ರ ಮಿತಿ ರದ್ದು ಬೇಡಿಕೆ ಬೆಂಬಲಿಸುವಿರಾ?–ಕಾಂಗ್ರೆಸ್

ನವದೆಹಲಿ: ‘ಪರಿಶಿಷ್ಟರು ಇತರೆ ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯ ಶೇ 50ರ ಮಿತಿ ತೆಗೆಯಬೇಕು ಎಂದು ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಉಪ ರಾಷ್ಟ್ರಪತಿ ಅವರೇ ನೀವು ಇದನ್ನು ಬೆಂಲಿಸುತ್ತೀರಾ’ ಎಂದು ಕಾಂಗ್ರೆಸ್‌ ಪಕ್ಷ ಭಾನುವಾರ ಪ್ರಶ್ನಿಸಿದೆ.

ರಾಹುಲ್‌ ಗಾಂಧಿ ವಿರುದ್ಧ ಮಾಡಲಾದ ಟೀಕೆಗೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪ‍ವನ್‌ ಖೇರಾ ಧನಕರ್ ಅವರಿಗೆ ಈ ಪ್ರಶ್ನೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.