ಮೇಪ್ಪಾಡಿ (ವಯನಾಡ್ ಜಿಲ್ಲೆ): ಇಲ್ಲಿನ ಮುಂಡಕ್ಕೈ ಮತ್ತು ಚೂರಲ್ ಮಲ ಪ್ರದೇಶದಲ್ಲಿ ಮಂಗಳಾವಾರ ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಸಾವಿಗೀಡಾದವರ ಪೈಕಿ 219 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಒಂದು ಮೃತದೇಹ ಗಂಡಿನದೋ ಹೆಣ್ಣಿನದೋ ಎಂದು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. 94 ಮೃತದೇಹಗಳ ಗುರುತನ್ನು ಸಂಬಂಧಿಕರು ಪತ್ತೆಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ಮೃತದೇಹಗಳ
ಈ ಪೈಕಿ 91 ಮಂದಿಯ ದೇಹದ ಭಾಗಗಳು ಮಾತ್ರ ಇದ್ದವು. ದುರಂತ ಘಟಿಸಿದ ಪ್ರದೇಶದಿಂದ 221 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 91 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 130 ಮಂದಿಯನ್ನು ವಿವಿಧ ಕಾಳಜಿ ಕೇಂದ್ರಗಳಿಗೆ ಸೇರಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 86 ಮಂದಿ ವಯನಾಡ್ ಜಿಲ್ಲೆಯ ಆಸ್ಪತ್ರೆಗಳು ಮತ್ತು ಐವರು ಮಲಪ್ಪುರಂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಇದ್ದಾರೆ.
ಸೇನೆ ನಿರ್ಮಿಸಿದ ಸೇತುವೆ ನಾಡಿಗೆ ಸಮರ್ಪಣೆ
ಮೇಪ್ಪಾಡಿ: ಭೂಕುಸಿತದಿಂದ ಸಂಪೂರ್ಣ ಕೊಚ್ಚಿಕೊಂಡು ಹೋದ ಸೇತುವೆಯ ಜಾಗದಲ್ಲಿ ಎರಡೇ ದಿನಗಳಲ್ಲಿ ಕಬ್ಬಿಣದ ಹೊಸ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿದೆ.
ರಕ್ಷಣಾ ಕಾರ್ಯಾಚರಣೆಗೆ ಬಂದಿರುವ ಸೈನಿಕರು ಸೇತುವೆಯನ್ನು ನಿರ್ಮಿಸುತ್ತಿದ್ದು ಇದನ್ನು ನಾಡಿಗಾಗಿ ಸಮರ್ಪಿಸಲಾಗುವುದು ಎಂದು ಮೇಜರ್ ಜನರಲ್ ವಿನೋದ್ ಮ್ಯಾಥ್ಯು ತಿಳಿಸಿದರು.
ದುರಂತಪೀಡಿತ ಮೂರು ಊರುಗಳ ಪೈಕಿ ಚೂರಲ್ ಮಲ ಮತ್ತು ಅಟ್ಟಮಲವನ್ನು ಸಂಪರ್ಕಿಸುವ ಸೇತುವೆ ಮುಂಡಕ್ಕೈ ಸಮೀಪದಲ್ಲಿ ನೀರುಪಾಲಾಗಿತ್ತು.
ಮುಖ್ಯಮಂತ್ರಿ ಭೇಟಿ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದು ಕಲ್ಪೆಟ್ಟದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಸರ್ವಪಕ್ಷ ಕೂಡ ನಡೆದಿದ್ದು ಘಟನೆಯನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸುವಂತೆ ಎಲ್ಲ ಪಕ್ಷದವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.