ನವದೆಹಲಿ: ಪ್ರಮುಖ ಎಂಟು ವಿಧೇಯಕಗಳಿಗೆ ಒಪ್ಪಿಗೆ ನೀಡದೆ ತಡೆಹಿಡಿದಿರುವ ರಾಜ್ಯಪಾಲ ಸಿ.ವಿ. ಆನಂದ ಬೋಸ್ ನಡೆಯನ್ನು ಖಂಡಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ರಾಜ್ಯದ ವಿಶ್ವವಿದ್ಯಾನಿಲಯಗಳ ನಿರ್ವಹಣೆ ವಿಚಾರದಲ್ಲೂ ಆಡಳಿತಾರೂಢ ಟಿಎಂಸಿ ಸರ್ಕಾರ ಮತ್ತು ರಾಜ್ಯಪಾಲ ಸಿ.ವಿ. ಆನಂದ ಬೋಸ್ ನಡುವೆ ಜಟಾಪಟಿ ನಡೆಯುತ್ತಿದೆ.
ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯ ಕಾನೂನು (ತಿದ್ದುಪಡಿ) ಮಸೂದೆ, 2023 ಅನ್ನು ಬಿಜೆಪಿ ವಿರೋಧಿಸಿತ್ತು. ಹೊಸ ಶೋಧನಾ ಸಮಿತಿಯು ಕುಲಪತಿಗಳ ನೇಮಕದ ಮೇಲೆ ಆಡಳಿತ ಪಕ್ಷದ ನಿಯಂತ್ರಣವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಆರೋಪಿಸಿತ್ತು.
ರಾಜಭವನದಲ್ಲಿ ನಡೆದಿರುವ ಕೆಲ ಘಟನೆಗಳಿಂದ ಅಲ್ಲಿಗೆ ತೆರಳಲು ಭಯವಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿರುವುದಾಗಿ ಮಮತಾ ಬ್ಯಾನರ್ಜಿ ಅವರು ಜೂನ್ 27ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು. ಈ ಬಗ್ಗೆ ಜೂನ್ 28ರಂದು ಬೋಸ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಚೆಗೆ ಪ್ರಕರಣದ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್ ಮುಂದೂಡಿತ್ತು.
‘ಮಮತಾ ಮತ್ತು ಅವರ ಬೆಂಬಲಿಗರು ರಾಜ್ಯಪಾಲರ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದು, ಇನ್ನೂ ಮುಂದೆ ಅವರು ಈ ಬಗ್ಗೆ ಹೇಳಿಕೆ ನೀಡದಂತೆ ಮಧ್ಯಂತರ ತಡೆ ನೀಡಬೇಕು’ ಎಂದು ಬೋಸ್ ಪರ ವಕೀಲರು ನ್ಯಾಯಲಯಾಕ್ಕೆ ಮನವಿ ಮಾಡಿದ್ದರು.
ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯಪಾಲ ಬೋಸ್ ವಿರುದ್ಧ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.