ADVERTISEMENT

ಎಸ್‌ಎಸ್‌ಎಲ್‌ಸಿ: ಕನ್ನಡ ಮಾಧ್ಯಮದ ಸಾಧಕರು...

​ಪ್ರಜಾವಾಣಿ ವಾರ್ತೆ
Published 12 ಮೇ 2014, 20:13 IST
Last Updated 12 ಮೇ 2014, 20:13 IST

‘ಮುಂದೆ ಎಂಜಿನಿಯರ್‌ ಆಗುವೆ’

ಸಾಲ್ಕಣಿ  (ಉತ್ತರ ಕನ್ನಡ): ‘ಕೃಷಿ ಕುಟುಂಬದ ನಾನು ಖಾಸಗಿಯಾಗಿ ಟ್ಯೂಷನ್‌ಗೆ  ಹೋಗುತ್ತಿರಲಿಲ್ಲ. ಪ್ರತಿದಿನ 6–7 ತಾಸು ಅಭ್ಯಾಸ, ಹೋಮ್‌ವರ್ಕ್‌ನಲ್ಲಿ ಅಚ್ಚುಕಟ್ಟುತನ, ಶಿಕ್ಷಕರು ಕಲಿಸಿದ ಪಾಠ, ಮನೆಯಲ್ಲಿ ಅಪ್ಪ–ಅಮ್ಮನ ಪ್ರೋತ್ಸಾಹ ಹೆಚ್ಚಿನ ಅಂಕ ಗಳಿಸಲು ಅನುಕೂಲವಾಯಿತು. ಮುಂದೆ ಎಂಜಿನಿಯರ್‌ ಆಗುವ ಆಸೆಯಿದೆ’ ಎಂದು ಕನ್ನಡ ಮಾಧ್ಯಮದಲ್ಲಿ 615 (ಶೇ 98.4) ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಉ.ಕ. ಜಿಲ್ಲೆಯ ಶಿರಸಿ ತಾಲ್ಲೂಕಿನ ತಾಲ್ಲೂಕಿನ ಸಾಲ್ಕಣಿಯ ಲಕ್ಷ್ಮಿ ನರಸಿಂಹ ಪ್ರೌಢಶಾಲೆಯ ಮೈತ್ರಿ ಹೆಗಡೆ ಹೇಳಿದ್ದಾರೆ.

‘ಮಗಳ ಸಾಧನೆ ಸಂತಸ ತಂದಿದೆ’
ಹಾವೇರಿ: ‘
ಶಿಕ್ಷಕರ ಮಾರ್ಗದರ್ಶನ, ಮಗಳ ಸತತ ಅಧ್ಯಯನ, ಸಾಧನೆಗೆ ಸಹಕಾರಿಯಾಗಿದೆ. ಅವಳ ಸಾಧನೆ ನಮಗೆ ಖುಷಿ ತಂದಿದೆ’ ಎಂದು ಕನ್ನಡ ಮಾಧ್ಯಮದಲ್ಲಿ 614 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿರುವ ಇಲ್ಲಿಯ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಗೆಳೆಯರ ಬಳಗದ ಪ್ರೌಢಶಾಲೆಯ ನೇಹಾ ಕಾಮತ್‌ ಅವರ ತಂದೆ ನಾಗರಾಜ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ವೈದ್ಯಕೀಯ ಶಿಕ್ಷಣ ಪಡೆಯುವೆ’
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): 
‘ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯವೇ ಇರಲಿಲ್ಲ. ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿ ಗಣಿಸದೇ ನಿರಂತರ ಅಧ್ಯಯನದಿಂದ ವಿಷಯ ಮನನ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ಪಾಠ ಬೋಧ ನೆಯನ್ನು ಗಮನವಿಟ್ಟು ಆಲಿಸಿ, ಮನೆಯಲ್ಲೂ ಸುಮಾರು 5 ರಿಂದ 6 ತಾಸು ಅಧ್ಯಯನ ಮಾಡುತ್ತಿದ್ದೆ. ಮುಂದೆ ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು, ನಂತರ ವೈದ್ಯಕೀಯ ಶಿಕ್ಷಣ ಪಡೆಯುವೆ’ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 617 (ಶೇ.98.72) ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಜಿಲ್ಲೆಯ ಹಾರೂಗೇರಿಯ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಶಾಲು ಸಂಗನಬಸವ ಗದಗ ಸಂತಸ ವ್ಯಕ್ತಪಡಿಸಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.