ADVERTISEMENT

ಪೆರೋಲ್‌ ಮೇಲೆ 47 ಕೈದಿಗಳು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2014, 19:30 IST
Last Updated 22 ಫೆಬ್ರುವರಿ 2014, 19:30 IST

ಬೆಂಗಳೂರು: ಪೆರೋಲ್‌ ಮೇಲೆ ಬಿಡುಗಡೆ ಹೊಂದಿದ್ದ ಕೈದಿಗಳ ಪೈಕಿ 47 ಜನ ಜೈಲಿಗೆ ವಾಪಸ್‌ ಬಂದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

ಪೆರೋಲ್‌ ಪಡೆದು ಜೈಲಿನಿಂದ ಹೊರಹೋಗಿರುವ ಅಪರಾಧಿಗಳ ಕುರಿತು ವಿವರ ನೀಡುವಂತೆ ಅರ್ಜಿ­ಯೊಂದರ ವಿಚಾರಣೆ ವೇಳೆ ನ್ಯಾಯ­ಮೂರ್ತಿ­ಗಳಾದ ಡಾ.ಕೆ. ಭಕ್ತವತ್ಸಲ ಮತ್ತು ಕೆ.ಎನ್‌. ಕೇಶವ ನಾರಾಯಣ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿತ್ತು.
ವಾಪಸು ಬಾರದ ಕೈದಿಗಳ ಪೈಕಿ 30 ಜನ ಬೆಂಗಳೂರಿನ ಜೈಲಿನಲ್ಲಿದ್ದವರು. ವಾಪಸ್‌ ಬಾರದವರ ವಿರುದ್ಧ ಮೊಕ­ದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ನ್ಯಾ. ಪದ್ಮರಾಜ ಆಯೋಗ: ಅರ್ಜಿ ವಜಾ
1995ರ ನಂತರ ನಡೆದ ಎಲ್ಲ ಡಿನೋಟಿಫಿಕೇಷನ್‌ (ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡು­ವುದು) ಪ್ರಕರಣಗಳ ತನಿಖೆಗೆ ರಚಿಸ­ಲಾಗಿದ್ದ ನ್ಯಾಯಮೂರ್ತಿ ಬಿ. ಪದ್ಮರಾಜ ಆಯೋಗದ ಅವಧಿ ವಿಸ್ತರಿಸಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲು ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಆಯೋಗದ ಅವಧಿಯನ್ನು ವಿಸ್ತರಿ­ಸು­ವಂತೆ, ಎಲ್ಲ ಡಿನೋಟಿಫಿಕೇಷನ್‌ ಪ್ರಕರ­ಣ­ಗಳ ತನಿಖೆಯನ್ನು ಆಯೋಗ­ದಿಂದಲೇ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ವಕೀಲ ಎನ್‌.ಪಿ. ಅಮೃ­ತೇಶ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ.­ ನಾಗರತ್ನ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು. ಅರ್ಜಿ ವಜಾ­ಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT