ADVERTISEMENT

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ 100 ಉದ್ಯೋಗ: ಸಚಿವ ಸಂತೋಷ್ ಲಾಡ್‌

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:20 IST
Last Updated 13 ಜೂನ್ 2024, 19:20 IST
ಸಂತೋಷ್ ಲಾಡ್‌
ಸಂತೋಷ್ ಲಾಡ್‌   

ಬೆಂಗಳೂರು: ಖಾಸಗಿ ವಲಯದ ಕೈಗಾರಿಕೆಗಳಲ್ಲಿ ‘ಸಿ’ ಮತ್ತು ‘ಡಿ’ ವೃಂದದಲ್ಲಿ ಕನ್ನಡಿಗರಿಗೆ 100ರಷ್ಟು ಮತ್ತು ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ನಿಯಮ ತಿದ್ದುಪಡಿಗೆ ಮುಂದಿನ ಸಚಿವ ಸಂಪುಟಕ್ಕೆ ಪ್ರಸ್ತಾವ ಮಂಡಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ‘ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) (ತಿದ್ದುಪಡಿ) ನಿಯಮಗಳು– 2024’ ಅನ್ನು ರೂಪಿಸುವ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುರುವಾರ ಸಭೆ ನಡೆಸಿದರು.

ಈ ಕುರಿತು ಮಾತನಾಡಿದ ಲಾಡ್‌, ‘ಸರೋಜಿನಿ ಮಹಿಷಿ ವರದಿಯನ್ನು ಈವರೆಗೆ ನೀತಿಯಾಗಿ ಪರಿಗಣಿಸಲಾಗಿದೆ. ಅದರಲ್ಲಿರುವ ಮೀಸಲಾತಿ ಶಿಫಾರಸನ್ನು ಕಾನೂನಾಗಿ ಮಾಡಲು ಉದ್ದೇಶಿಸಲಾಗಿದೆ‌. ಮೀಸಲಾತಿ ಕಡ್ಡಾಯಗೊಳಿಸಲು ನಿಯಮ ತಿದ್ದುಪಡಿ ಮಾಡಬೇಕಿದ್ದು, ಅದಕ್ಕೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಿದೆ. 50ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಎಲ್ಲ ಕೈಗಾರಿಕೆಗಳು ಈ ನಿಯಮಕ್ಕೆ ಬದ್ಧರಾಗುವಂತೆ ಮಾಡಲಾಗುವುದು’ ಎಂದರು.

ADVERTISEMENT

‘ಖಾಸಗಿ ವಲಯದ ಪ್ರತಿಯೊಂದು ಕೈಗಾರಿಕೆಗೂ ಸರ್ಕಾರದಿಂದ ಒಂದಲ್ಲ ಒಂದು ರೀತಿಯ ಲಾಭ ಸಿಗುತ್ತಿದೆ. ತೆರಿಗೆ ರಿಯಾಯಿತಿಯಷ್ಟೇ ಅಲ್ಲದೆ, ಭೂಮಿ ಖರೀದಿ, ನೀರು, ವಿದ್ಯುತ್ ಪೂರೈಕೆಯಲ್ಲಿಯೂ ರಿಯಾಯಿತಿ ನೀಡಲಾಗುತ್ತಿದೆ’ ಎಂದರು.

ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ 100ರಷ್ಟು ಮೀಸಲಾತಿ ನೀಡುವಂತೆ ಈ ಹಿಂದಿನಿಂದಲೂ ಬೇಡಿಕೆಯಿದೆ. ‌ರಾಜ್ಯ ಸರ್ಕಾರವು 2019ರಲ್ಲಿ ಸ್ಥಾಯಿ ಆದೇಶದ ನಿಯಮಗಳಿಗೆ ತಿದ್ದುಪಡಿ ಮಾಡಿ ಉದ್ಯೋಗದಲ್ಲಿ ಕನ್ನಡಿಗರಿಗೆ ‘ಆದ್ಯತೆ’ ನೀಡುವಂತೆ ಖಾಸಗಿ ವಲಯಕ್ಕೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.