ADVERTISEMENT

11 ವಿ.ವಿ. ಅನುದಾನಕ್ಕೆ ಯುಜಿಸಿ ಕತ್ತರಿ!

ವಿನಿಯೋಗ ಪ್ರಮಾಣ ಪತ್ರ ಸಲ್ಲಿಕೆ ವಿಳಂಬವೇ ಕಾರಣ

ಬಸವರಾಜ ಮರಳಿಹಳ್ಳಿ
Published 12 ಆಗಸ್ಟ್ 2015, 19:40 IST
Last Updated 12 ಆಗಸ್ಟ್ 2015, 19:40 IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ 11 ವಿಶ್ವವಿದ್ಯಾಲಯಗಳು ನಿಗದಿತ ಅವಧಿಯೊಳಗೆ ಅನುದಾನದ ಬಳಕೆ ಪ್ರಮಾಣ ಪತ್ರ ನೀಡದ ಕಾರಣ, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) 2014–15ನೇ ಸಾಲಿನ ಅನುದಾನ ಬಿಡುಗಡೆ ಮಾಡಿಲ್ಲ.

2014–15ರ ಆರ್ಥಿಕ ವರ್ಷ ಮುಗಿದ ನಂತರ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರಿಂದ ಸ್ಥಗಿತಗೊಂಡ ಅನುದಾನ ಬಿಡುಗಡೆ ಆಗುವುದಿಲ್ಲವಾದರೂ, 2015–16ನೇ ಸಾಲಿನ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಯುಜಿಸಿ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳು 2015ರ ಮಾರ್ಚ್‌ 31ರೊಳಗೆ ಅನುದಾನ ಬಳಕೆ
ಪ್ರಮಾಣ ಪತ್ರ ಸಲ್ಲಿಸಿದ್ದು, ಒಂದು ವರ್ಷ ತಡವಾಗಿದ್ದರಿಂದ ಈ ಎರಡು ವಿ.ವಿ.ಗಳಿಗೂ ನಿಗದಿತ ಅನುದಾನ ಬಿಡುಗಡೆಯಾಗಿಲ್ಲ. ಇನ್ನುಳಿದ ವಿಶ್ವವಿದ್ಯಾಲಯಗಳು ಇತ್ತೀಚೆಗಷ್ಟೇ ಪ್ರಮಾಣಪತ್ರ ಸಲ್ಲಿಸಿವೆ.

ಆದ್ದರಿಂದ ಯುಜಿಸಿಯ ಸಾಮಾನ್ಯ ಅಭಿವೃದ್ಧಿಯ 12ನೇ ಯೋಜನೆ ಅಡಿ ಬಿಡುಗಡೆಯಾದ 2013– 14ನೇ ಸಾಲಿನ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ನೀಡದ ಕಾರಣ ಈ ಎಲ್ಲ ವಿಶ್ವವಿದ್ಯಾಲಯಗಳ ಅನುದಾನ ತಡೆ ಹಿಡಿದು ಮಾರ್ಚ್‌ 31ರಂದು ಆದೇಶ ಹೊರಡಿಸಲಾಗಿದೆ.

ಯುಜಿಸಿ ನೀಡಿದ ಅನುದಾನವನ್ನು ನಿರ್ದಿಷ್ಟ ಉದ್ದೇಶಕ್ಕೇ ಬಳಸಬೇಕಿದೆ. ಅನುದಾನ ಬಿಡುಗಡೆಗೂ ಮುನ್ನವೇ ಯುಜಿಸಿಯಿಂದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಬೇಕು. ಹೀಗೆ ಆಯಾ ಉದ್ದೇಶಕ್ಕೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿರುವ ಕುರಿತು ದೃಢೀಕರಿಸಬೇಕು. ಇದನ್ನು ಪರಿಶೀಲಿಸಿದ ನಂತರ ಯುಜಿಸಿ ಮುಂದಿನ ವರ್ಷದ ಅನುದಾನ ಬಿಡುಗಡೆ ಮಾಡುತ್ತದೆ.
*
ಯುಜಿಸಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿದ್ದು ಪೂರ್ಣಗೊಂಡಿರುವ ಕಾಮಗಾರಿಗಳ ₨ 95 ಲಕ್ಷಕ್ಕೆ ಮಾತ್ರ ಬಳಕೆ ಪ್ರಮಾಣ ಪತ್ರ ನೀಡಲಾಗಿದೆ.
-ಪ್ರೊ.ವಿಜಯ್‌ ಪೂಣಚ್ಚ ತಂಬಂಡ,
ಕುಲಸಚಿವ, ಹಂಪಿ ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.