ADVERTISEMENT

₹2 ಕೋಟಿ ಸುಲಿಗೆ ಪ್ರಕರಣ: ಮಹಾರಾಷ್ಟ್ರದಲ್ಲಿ ಗೋಪಾಲ ಜೋಶಿ ಬಂಧನ

ಪುಣೆಯಲ್ಲಿ ಅಜಯ್‌ ಜೋಶಿ ವಶಕ್ಕೆ ಪಡೆದು ವಿಚಾರಣೆ?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 0:34 IST
Last Updated 20 ಅಕ್ಟೋಬರ್ 2024, 0:34 IST
ಗೋಪಾಲ ಜೋಶಿ 
ಗೋಪಾಲ ಜೋಶಿ    

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್‌ ಫೂಲ್‌ ಸಿಂಗ್‌ ಚವ್ಹಾಣ್‌ ಅವರಿಂದ ₹2 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಅವರನ್ನು ಮಹಾರಾಷ್ಟ್ರದಲ್ಲಿ ಶನಿವಾರ ಬಂಧಿಸಲಾಗಿದೆ.

‘ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ತಲೆಮರೆಸಿಕೊಂಡಿದ್ದ ಖಚಿತ ಮಾಹಿತಿ ಬಂದಿತ್ತು. ಲಾಡ್ಜ್‌ವೊಂದರಲ್ಲಿ ಗೋಪಾಲ ಜೋಶಿ ವಾಸ್ಯವ್ಯ ಮಾಡಿದ್ದರು. ಅಲ್ಲಿಗೆ ತೆರಳಿದ್ದ ಬಸವೇಶ್ವರ ನಗರ ಠಾಣೆಯ ವಿಶೇಷ ಪೊಲೀಸ್‌ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ’ ಎಂದು ಮೂಲಗಳು ಖಚಿತಪಡಿಸಿವೆ.

‘ಗೋಪಾಲ ಜೋಶಿ ಅವರ ಪುತ್ರ ಅಜಯ್‌ ಜೋಶಿ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಮತ್ತೊಂದು ಪೊಲೀಸ್‌ ತಂಡವು ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದರೆ ಬಂಧಿಸಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿ ಗೋಪಾಲ ಜೋಶಿ ಅವರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಕೇಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ಒಮ್ಮೆ ₹25 ಲಕ್ಷ, ಮತ್ತೊಮ್ಮೆ ₹1.75 ಕೋಟಿಯನ್ನು ಗೋಪಾಲ ಜೋಶಿ ಮತ್ತು ಸಹಚರರು ಪಡೆದಿದ್ದರು ಎಂದು ದೇವಾನಂದ್‌ ಚವ್ಹಾಣ್‌ ಅವರ ಪತ್ನಿ ಸುನಿತಾ ಚವ್ಹಾಣ್‌ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇದುವರೆಗೂ ಮೂವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇಬ್ಬರು ಜೈಲಿಗೆ: ‘ಅಥಣಿಯ ಎಂಜಿನಿಯರ್ ಸೋಮಶೇಖರ್ ಹಾಗೂ ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ ವಿಜಯಕುಮಾರಿ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬಾಡಿ ವಾರಂಟ್‌ ಮೇಲೆ ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಸೋಮವಾರ ಮನವಿ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯಲ್ಲಿ ಶೋಧ: ದಾಖಲೆ ಜಪ್ತಿ

ಹುಬ್ಬಳ್ಳಿ: ಕೊಲ್ಹಾಪುರದಿಂದ ಗೋಪಾಲ ಜೋಶಿ ಅವರನ್ನು ಶನಿವಾರ ಮಧ್ಯಾಹ್ನ ಹುಬ್ಬಳ್ಳಿಗೆ ಕರೆತಂದ ಪೊಲೀಸ್‌ ತಂಡ ಪ್ರಕರಣದ ಸಂಬಂಧ ಮಾಹಿತಿ ಕಲೆಹಾಕಿತು.    ಬೆಂಗಳೂರು ಪಶ್ಚಿಮ ವಿಭಾಗದ ಎಸಿಪಿ ಚಂದನ ಕುಮಾರ್‌ ನೇತೃತ್ವದ ಪೊಲೀಸ್‌ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ ಕೇಶ್ವಾಪುರದ ಇಂದಿರಾ ಕಾಲೊನಿಯಲ್ಲಿರುವ ಗೋಪಾಲ ಜೋಶಿ ಅವರ ಮನೆಗೆ ತೆರಳಿ ಎರಡು ಗಂಟೆ ಪರಿಶೀಲಿಸಿತು. ಹಣಕಾಸಿನ ವ್ಯವಹಾರ ಮತ್ತು ಚೆಕ್‌ ವಹಿವಾಟಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ದಾಖಲೆ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ನಂತರ ಗೋಪಾಲ ಜೋಶಿ ಅವರನ್ನು ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ದೂರುದಾರರಾದ ಸುನಿತಾ ಚವ್ಹಾಣ್‌ ಅವರ ಸಮ್ಮುಖದಲ್ಲಿ ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.

ಜೋಶಿ ಹೆಸರು ದುರ್ಬಳಕೆ: ಸುನಿತಾ ಚವ್ಹಾಣ್

ಹುಬ್ಬಳ್ಳಿ: ‘ಲೋಕಸಭಾ ಟಿಕೆಟ್ ನೀಡುವುದಾಗಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅಮಿತ್‌ ಶಾ ಅವರ ಹೆಸರನ್ನು ಅನಗತ್ಯ ಎಳೆದು ತರಲಾಗುತ್ತಿದೆ. ಈ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ. ಪ್ರಲ್ಹಾದ ಜೋಶಿ ಅವರ ಹೆಸರನ್ನು ಗೋಪಾಲ ಜೋಶಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಪ್ರಕರಣದ ದೂರುದಾರೆ ಸುನಿತಾ ಚವ್ಹಾಣ್‌ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪಕ್ಷದಿಂದ ನಮಗೆ ಟಿಕೆಟ್ ಸಿಗುವ ಸಾಧ್ಯತೆ ಇತ್ತು.‌ ಶೇಖರನಾಯಕ್‌ ಎಂಬ ವ್ಯಕ್ತಿ ನನಗೆ ಕರೆ ಮಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ನಿಮ್ಮನ್ನು ಕೈಬಿಡುತ್ತಿಲ್ಲ ಎಂದಿದ್ದರು. ಆದರೆ ವಿಜಯಪುರದಿಂದ ಬೇರೆಯವರಿಗೆ ಟಿಕೆಟ್ ಸಿಕ್ಕಿದೆ ಎಂದು ಗೊತ್ತಾದಾಗ ಸುಮ್ಮನಿದ್ದೆ. ಆಗ ‌ಗೋಪಾಲ ಜೋಶಿ ಅವರು ಕರೆ ಮಾಡಿ ವಿಜಯಪುರ ಸಂಸದರಿಗೆ ಅನಾರೋಗ್ಯ ಕಾಡುತ್ತಿದ್ದು ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆಗ ₹25 ಲಕ್ಷ ಕೊಟ್ಟಿದ್ದೆ. ಅವರು ₹2 ಕೋಟಿಯಿಂದ ₹3 ಕೋಟಿವರೆಗೂ ಬೇಡಿಕೆ ಇಟ್ಟಿದ್ದರು’ ಎಂದು ಹೇಳಿದರು. ‘ಯಾರ ವಿರುದ್ಧ ನಾನು ದೂರು ಕೊಟ್ಟಿದ್ದೇನೋ ಅವರ ಬಗ್ಗೆ ಮಾತ್ರ ಮಾಧ್ಯಮದವರು ವಿಷಯ ಪ್ರಸ್ತಾಪಿಸಬೇಕು. ಪ್ರಕರಣದಲ್ಲಿ ಇಲ್ಲದವರ ಹೆಸರು ಕೇಳಿ ಬರುತ್ತಿರುವುದು ಸರಿಯಲ್ಲ. ಪ್ರಲ್ಹಾದ ಜೋಶಿ ಅವರು ಒಳ್ಳೆಯವರು. ಪ್ರಕರಣದಲ್ಲಿ ಅವರ ಪಾತ್ರವೇನೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.