ADVERTISEMENT

ಮುಖ್ಯಕಾರ್ಯದರ್ಶಿ ಭೇಟಿಯಾದ HDK ವಿಚಾರಣೆ ನಡೆಸಿದ್ದ ಲೋಕಾಯುಕ್ತ ADGP ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 14:39 IST
Last Updated 3 ಅಕ್ಟೋಬರ್ 2024, 14:39 IST
<div class="paragraphs"><p>ಎಡಿಜಿಪಿ ಎಂ. ಚಂದ್ರಶೇಖರ್‌,&nbsp;ಎಚ್‌.ಡಿ. ಕುಮಾರಸ್ವಾಮಿ</p></div>

ಎಡಿಜಿಪಿ ಎಂ. ಚಂದ್ರಶೇಖರ್‌, ಎಚ್‌.ಡಿ. ಕುಮಾರಸ್ವಾಮಿ

   

ಬೆಂಗಳೂರು: ‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನನ್ನ ವಿರುದ್ಧ ಅವಹೇಳನಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ’ ಎಂದು ತಮ್ಮ ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದ, ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ. ಚಂದ್ರಶೇಖರ್‌ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರನ್ನು ಗುರುವಾರ ಭೇಟಿ ಮಾಡಿದರು.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್‌, ‘ಕುಮಾರಸ್ವಾಮಿ ಮಾಡಿದ್ದ ಆರೋಪಗಳು ಸುಳ್ಳು ಎಂದು ಹೇಳಿದ್ದೇನೆ. ಪತ್ರವನ್ನೂ ಬರೆದಿದ್ದೇನೆ. ಮುಖ್ಯ ಕಾರ್ಯದರ್ಶಿಯನ್ನು​ ಭೇಟಿ ಮಾಡಲು ಬಂದಿದ್ದೆ. ನಾನು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಭಾಗಿ ಆಗಿರುವ ಆರೋಪ ಸುಳ್ಳು. ಯತೋ ಧರ್ಮಸ್ತತೋ ಜಯಃ (ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ) ಎಂದರು.

ADVERTISEMENT

ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರನ್ನು ಪ್ರಶ್ನಿಸಿದಾಗ, ‘ಅವರು (ಚಂದ್ರಶೇಖರ್‌) ಕಚೇರಿ ವಿಷಯ ಮಾತನಾಡಲು ಬಂದಿದ್ದರು. ಅವರು ಏನು ಮಾತನಾಡಿದರೆಂದು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದರು.

‘ಎಂ. ಚಂದ್ರಶೇಖರ್‌ ಒಬ್ಬ ಭ್ರಷ್ಟ ಅಧಿಕಾರಿ’ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಚಂದ್ರಶೇಖರ್‌ ಸಹೋದ್ಯೋಗಿಗಳಿಗೆ ಬರೆದಿದ್ದ ಪತ್ರದಲ್ಲಿ ಜಾರ್ಜ್‌ ಬರ್ನಾರ್ಡ್‌ ಶಾ ಮಾತನ್ನು ಉಲ್ಲೇಖಿಸಿ, ‘ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಗುದ್ದಾಡಿದರೆ ಹೊಲಸು ನಿಮಗೂ ಮೆತ್ತಿಕೊಳ್ಳುತ್ತದೆ, ಹಂದಿಗೂ ಮೆತ್ತಿಕೊಳ್ಳುತ್ತದೆ. ಆದರದು ಹಂದಿಗೆ ಇಷ್ಟವಾಗುತ್ತದೆ’ ಎಂದಿದ್ದರು. ಈ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಕೂಡ ಬರೆದಿರುವುದಾಗಿ ಕುಮಾರಸ್ವಾಮಿ ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.