ADVERTISEMENT

ಹಿಂದೂ ಕಾರ್ಯಕ್ರಮಗಳಿಗೆ ಶಸ್ತ್ರಸಜ್ಜಿತ ಶ್ರೀರಾಮಸೇನೆ ರಕ್ಷಣೆ: ಗಂಗಾಧರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 12:53 IST
Last Updated 22 ಸೆಪ್ಟೆಂಬರ್ 2024, 12:53 IST
<div class="paragraphs"><p>ಗಂಗಾಧರ ಕುಲಕರ್ಣಿ</p></div>

ಗಂಗಾಧರ ಕುಲಕರ್ಣಿ

   

ಮಂಗಳೂರು: 'ರಾಜ್ಯ ಸರ್ಕಾರದ ಮೇಲೆ ನಂಬಿಕೆ ಉಳಿದಿಲ್ಲ.‌ಇನ್ನು ಮುಂದೆ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ, ಮೆರವಣಿಗೆಗಳಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಶಸ್ತ್ರಸಜ್ಜಿತರಾಗಿ ರಕ್ಷಣೆ ನೀಡಲಿದ್ದಾರೆ' ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ಇಲ್ಲಿ ಸುದ್ದಿಗಾರರ ಜಿತೆ ಭಾನುವಾರ ಮಾತನಾಡಿದ ಅವರು, 'ರಾಜ್ಯದಲ್ಲಿ ಜೆಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಗಣಪತಿ ವಿಸರ್ಜನೆಯ ಮೆರವಣಿಗೆ ಸಾಗುವಾಗ ಪೆಟ್ರೋಲ್ ಬಾಂಬ್ ಎಸೆಯುವ ಮಟ್ಟಕ್ಕೆ ಬಂದು ನಿಂತಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಹೊಣೆ. ನಾಗಮಂಗಲ ಗಲಭೆಯನ್ನು ಗೃಹಸಚಿವರು ಆಕಸ್ಮಿಕ ಘಟನೆ ಎನ್ನುತ್ತಾರೆ. ಸರ್ಕಾರವೇ ಅವರ ಜತೆ ನಿಂತಿದೆ. ಜೆಹಾದಿಗಳ ಗೂಂಡಾಗಿರಿ ತಡೆಯಲು ಅಸಮರ್ಥರಾದ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದರು.

ADVERTISEMENT

'ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ಹಿಂದೂಗಳಿಗೆ ಭಾರಿ ದ್ರೋಹವೆಸಗಲಾಗಿದೆ. ಈ ವಿಚಾರವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮನೆಗೆ ಮುತ್ತಿಗೆ ಹಾಕಲು ಚಿಂತನೆ ನಡೆಸಿದ್ದೇವೆ' ಎಂದರು.

ತಿರುಪತಿಯಲ್ಲಿ ಸುಸಜ್ಜಿತ ಪ್ರಯೋಗಾಲಯ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.