ಬೆಂಗಳೂರು: ‘ರಾಜ್ಯದ 41 ತಾಲ್ಲೂಕುಗಳಲ್ಲಿ ಜಾರಿಯಲ್ಲಿರುವ ಅಟಲ್ ಭೂಜಲ ಯೋಜನೆಯ ಕಾಮಗಾರಿಗಳನ್ನು ತ್ವರಿತಗೊಳಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸೂಚನೆ ನೀಡಿದರು.
ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ ಶನಿವಾರ ನಡೆಸಿದ ಅವರು, ‘ಸಮುದಾಯದ ಸಹಯೋಗದಲ್ಲಿ ಅಂತರ್ಜಲ ವೃದ್ದಿ ಹಾಗೂ ಅಂತರ್ಜಲ ಸಮರ್ಪಕ ನಿರ್ವಹಣೆ ಮಾಡುವ ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದರು.
ಪಿಎಂಕೆಎಸ್ವೈ (ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ) ಹಾಗೂ ಕೆರೆಗಳ ಕಾಯಕಲ್ಪದ (ಆರ್ಆರ್ಆರ್) ಯೋಜನೆಯ ಅಡಿಯಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿರುವ ಪ್ರಸ್ತಾವಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ನವೆಂಬರ್ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಕೋಲಾರ ಜಿಲ್ಲೆಯಲ್ಲಿ ಅಟಲ್ ಭೂಜಲ ಯೋಜನೆಯ ಕಾಮಗಾರಿಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಪಿಎಂಕೆಎಸ್ವೈ ಯೋಜನೆಯ ಅಡಿಯಲ್ಲಿ ಪ್ರಸ್ತಾವ ಸಿದ್ಧಗೊಳಿಸದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈಗಾಗಲೇ ನಿರ್ದೇಶನ ನೀಡಿದಂತೆ, ಈ ಎರಡೂ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಪ್ರಸ್ತಾವಗಳನ್ನು ತಯಾರಿಸುವಂತೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ಕಾರ್ಯದರ್ಶಿ ರಾಘವನ್, ಅಟಲ್ ಭೂಜಲ ಯೋಜನಾ ನಿರ್ದೇಶಕ ಕಿರಣ್ ಮಸೂತಿ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.