ADVERTISEMENT

ಮೌಲ್ವಿ ಜತೆಗೆ ವ್ಯವಹಾರ, ಪಾಲುದಾರಿಕೆ ಇಲ್ಲ : ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:17 IST
Last Updated 8 ಡಿಸೆಂಬರ್ 2023, 16:17 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಳಗಾವಿ: ‘ನನ್ನ ಜತೆ ವ್ಯವಹಾರ ಇರುವ ಕುಟುಂಬಕ್ಕೂ ಮೌಲ್ವಿ ತನ್ವೀರ್ ಪೀರ್ ಹಾಶ್ಮಿ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ನಾನು ಪಾಲುದಾರನಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅವನೊಬ್ಬ ಭಯೋತ್ಪಾದಕ. ಅವರ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದೇನೆ ಎನ್ನುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಹೇಳಿದರು.

‘50–60 ವರ್ಷದ ಹಿಂದೆ ನಗರಸಭೆಯ ಆಸ್ತಿಯನ್ನು ಭೋಗ್ಯಕ್ಕೆ ಪಡೆಯಲಾಗಿತ್ತು. ಅದರ ಮೂಲ ಮಾಲೀಕ ನನ್ನ ತಂದೆ. 55 ವರ್ಷಗಳ ಹಿಂದೆ ತಂದೆ ಜತೆಗೆ ನಾಲ್ಕೈದು ಜನ ಇದ್ದರು. ಅವರಲ್ಲಿ ಇಬ್ಬರು ಮುಸ್ಲಿಂರು. ಭೋಗ್ಯದ ಮಾಲೀಕತ್ವವಿದ್ದ ಮುಸ್ಲಿಂನಿಗೂ, ಈ ಭಯೋತ್ಪಾದಕನಿಗೂ ಸಂಬಂಧವಿಲ್ಲ. ಮೌಲ್ವಿಯ ಗದ್ದುಗೆಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿದ್ದೇನೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಆಗ್ರಹಿಸಿದರು.

ADVERTISEMENT

ವಿಜಯಪುರದಲ್ಲಿ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಯತ್ನಾಳ, ‘1971ರಲ್ಲಿ ತಂದೆ ಸೇರಿ ನಾಲ್ಕೈದು ಜನರು ಲೀಜ್ ಆಧಾರದಲ್ಲಿ ಟೂರಿಸ್ಟ್ ಹೋಟೆಲ್‌ ಆರಂಭಿಸಿದ್ದು ನಿಜ. ಆದರೆ, ಇದರಲ್ಲಿ ಈ ಮೌಲ್ವಿಯ ಪಾಲುದಾರಿಕೆ ಇಲ್ಲ. ಅವರ ದೂರದ ಸಂಬಂಧಿ ಇದ್ದಾರೆ’ ಎಂದರು.

‘ವಿಜಯಪುರದಲ್ಲಿ ಮೌಲ್ವಿ ಮನೆ ಮತ್ತು ನನ್ನ ಮನೆ ಅಕ್ಕಪಕ್ಕದಲ್ಲಿ ಇದೆ ಎಂದಾಕ್ಷಣ ಆತನ ಎಲ್ಲ ಚಟುವಟಿಕೆಗಳನ್ನು ನಾನು ಗಮನಿಸಬೇಕು ಎಂದೇನೂ ಇಲ್ಲ. ಆತನೊಂದಿಗೆ ಯಾವುದೇ ಸ್ನೇಹ, ವ್ಯವಹಾರ ಇಟ್ಟುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.