ಬೆಂಗಳೂರು: ಹುಲಿ ಉಗುರು ಒಳಗೊಂಡ ಲಾಕೆಟ್ ಧರಿಸಿದ್ದ ಆರೋಪದಡಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವರ್ತೂರು ಸಂತೋಷ್ (34) ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಎಸಿಜೆಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಲರ್ಸ್ ಕನ್ನಡ ವಾಹಿನಿಯ ‘ಬಿಗ್ಬಾಸ್’ ರಿಯಾಲಿಟಿ ಶೋನ 10ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಸಂತೋಷ್ ಅವರನ್ನು ಕಗ್ಗಲೀಪುರ ವಲಯ ಅರಣ್ಯಾಧಿಕಾರಿ ನೇತೃತ್ವ ತಂಡ, ಅ. 22ರಂದು ಬಂಧಿಸಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಸಂತೋಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಸಂತೋಷ್ ಅವರು ಜಾಮೀನು ನೀಡುವಂತೆ ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವ್ಯಕ್ತಿಯೊಬ್ಬರಿಂದ ಶ್ಯೂರಿಟಿ ಒದಗಿಸಬೇಕು ಹಾಗೂ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕು ಸೇರಿದಂತೆ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
ಸಂತೋಷ್ ಪರ ವಾದ ಮಂಡಿಸಿದ್ದ ವಕೀಲರು, ‘ಸಂತೋಷ್ ಕೃಷಿ ಕುಟುಂಬದವರು. ಇದುವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಹುಲಿ ಉಗುರು ಧರಿಸಿದ್ದ ನಟ, ನಿರ್ಮಾಪಕರು ಹಾಗೂ ಇತರರಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ಸಂತೋಷ್ ಅವರಿಗೆ ಅಂಥ ಯಾವುದೇ ನೋಟಿಸ್ ನೀಡದೇ ಬಂಧಿಸಿದ್ದರು. ವೀರಪ್ಪನ್ ರೀತಿಯಲ್ಲಿ ಸಂತೋಷ್ ಅವರನ್ನು ನಡೆಸಿಕೊಳ್ಳಲಾಗಿದೆ’ ಎಂದು ಹೇಳಿದ್ದರು.
ಜೈಲಿನಿಂದ ಬಿಡುಗಡೆ ಶೀಘ್ರ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಜಾಮೀನು ಪ್ರತಿ ರವಾನೆ ಆಗಲಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಿರುವ ಅಧಿಕಾರಿಗಳು, ಸಂತೋಷ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಿದ್ದಾರೆ. ಶುಕ್ರವಾರ ರಾತ್ರಿ ಸಂತೋಷ್ ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.