ADVERTISEMENT

‘ಮುಡಾ’ ಹಗರಣಕ್ಕೆ ಬಿಜೆಪಿಯೇ ಕಾರಣ: ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 12:42 IST
Last Updated 10 ಜುಲೈ 2024, 12:42 IST
<div class="paragraphs"><p>ರಾಮಲಿಂಗಾ ರೆಡ್ಡಿ</p></div>

ರಾಮಲಿಂಗಾ ರೆಡ್ಡಿ

   

ಹೊಸಪೇಟೆ (ವಿಜಯನಗರ): ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಬಿಜೆಪಿಯೇ ಕಾರಣ. ಅವರ ಕಾಲದಲ್ಲೇ ನಿವೇಶನ ಹಂಚಿಕೆಯಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದರು.

ಇಲ್ಲಿ ₹35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿವೇಶನ ಹಂಚುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು, ‘ಮುಡಾ’ದಲ್ಲಿ ಅವರ ಪಕ್ಷದವರೇ ಅಧ್ಯಕ್ಷರಾಗಿದ್ದರು. ಈ ಹಗರಣಕ್ಕೆ ಬಿಜೆಪಿ ಸರ್ಕಾರವೇ ಹೊಣೆ ಹೊರತು ನಮ್ಮ ತಪ್ಪೇನಿಲ್ಲ ಎಂದರು.

ADVERTISEMENT

ಬಿಜೆಪಿ ಅವಧಿಗೆ ಹೋಲಿಸಿದರೆ ನಮ್ಮಲ್ಲಿ ಇದೀಗ ಬೆಳಕಿಗೆ ಬಂದಿರುವ ಹಗರಣಗಳು ಏನೇನೂ ಅಲ್ಲ. ಶೇ 40 ಲಂಚ,  ಎಸ್‌ಐ, ಎಂಜಿನಿಯರ್‌ಗಳ ನೇಮಕಾತಿ ಸಹಿತ ಪ್ರತಿಯೊಂದು ನೇಮಕಾತಿಯಲ್ಲೂ ಹಗರಣ ನಡೆದಿತ್ತು. ಸ್ವಜನ ಪಕ್ಷಪಾತ ಸಹಿತ ಹಲವು ಅಕ್ರಮಗಳು ಅವರ ಅವಧಿಯಲ್ಲಿ ಆಗಿವೆ ಎಂದು ಹೇಳಿದರು.

‘ವಾಲ್ಮೀಕಿ ನಿಗಮದಲ್ಲಿ ಅಕ್ರಮ ಕಂಡುಬಂದ ಬಳಿಕ ತನಿಖೆಗೆ ನಾವೇ ಆದೇಶಿಸಿದ್ದೇವೆ. ತನಿಖೆ ಕೊನೆಗೊಂಡ ಬಳಿಕ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ’ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.