ADVERTISEMENT

ಕಾಂಗ್ರೆಸ್‌ ಓಟಕ್ಕೆ ಕರ್ನಾಟಕದ ಕಡಿವಾಣ: ‘ಒಕ್ಕಲಿಗರ ಗರಿಷ್ಠ ಮತಗಳು ಕಮಲಕ್ಕೆ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 15:59 IST
Last Updated 7 ಜೂನ್ 2024, 15:59 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ನಿಗದಿತ ಗುರಿ ತಲುಪಲಾಗದಿದ್ದರೂ ಕಾಂಗ್ರೆಸ್‌ ಓಟಕ್ಕೆ  ಕಡಿವಾಣ ಹಾಕಲಾಗಿದೆ. ಇದರಿಂದ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಮೂರಂಕಿ ಗಡಿ ದಾಟಲು ಸಾಧ್ಯವಾಗಿಲ್ಲ. ಇನ್ನೂ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ್ದರೆ 23ರಿಂದ 24 ಸ್ಥಾನ ಗೆಲ್ಲುವ ಅವಕಾಶವಿತ್ತು’.

ಬಿಜೆಪಿ ರಾಜ್ಯ ಘಟಕ ಸಿದ್ಧಪಡಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತ ಪ್ರಾಥಮಿಕ ವರದಿಯಲ್ಲಿ ಈ ಮೇಲಿನ ಅಂಶ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ 20ರಿಂದ 23 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೇರಿದ ಕಾರಣ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿ ನೀಡಲಾಗಿತ್ತು. ಆದರೆ, ಬಿಜೆಪಿ– ಜೆಡಿಎಸ್ ಮೈತ್ರಿಯ ಕಾರಣ ಕಾಂಗ್ರೆಸ್‌ ಕನಸು ನುಚ್ಚು ನೂರಾಗಿದೆ.  ಇದರಿಂದಾಗಿ ಕೇಂದ್ರದಲ್ಲಿ 100ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅದೇ ರೀತಿ ಬಿಜೆಪಿ 230 ಆಸುಪಾಸಿಗೆ ಕುಸಿಯುವುದು ತಪ್ಪಿದೆ. ಇದು ರಾಜ್ಯ ಬಿಜೆಪಿಯ ಗಮನಾರ್ಹ ಸಾಧನೆ. ಇದು 19 ಸ್ಥಾನಗಳ ಗೆಲುವಿನ  ಮಹತ್ವ ಎಂದು ಬಿಜೆಪಿ ಹೇಳಿಕೊಂಡಿದೆ.

ಕಾಂಗ್ರೆಸ್‌ ತನ್ನ ಗುರಿಯನ್ನು ಮುಟ್ಟಲು 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು,  ಸಂಬಂಧಿಕರು, ಬಲಾಢ್ಯರನ್ನೇ ಕಣಕ್ಕೆ ಇಳಿಸಿತ್ತು. ಗರಿಷ್ಠ ಸಂಪನ್ಮೂಲವನ್ನು ಬಳಸಿಕೊಂಡಿತ್ತು. ಆದರೂ ಮೈತ್ರಿ ಕೂಟದ ಕಾರ್ಯಕರ್ತರ ಜಿದ್ದಾಜಿದ್ದಿನ ಪೈಪೋಟಿ ಕಾರಣ 19 ಸ್ಥಾನಗಳನ್ನು ಗೆದ್ದುಕೊಳ್ಳಲು ಸಾಧ್ಯವಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ತವರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಣಿಸಲಾಗಿದೆ. ಅದರಲ್ಲೂ ಅತ್ಯಂತ ಕಠಿಣ ಎನಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಡಾ.ಸಿ.ಎನ್‌.ಮಂಜುನಾಥ್‌ ಅಧಿಕ ಮತಗಳ ಅಂತರಿದಂದ ಮಣಿಸಿರುವುದು ಅಸಾಮಾನ್ಯ ಗೆಲುವು ಎಂದಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮತಗಳು ಪರಸ್ಪರ ಪರಿಣಾಮಕಾರಿಯಾಗಿ ವರ್ಗಾವಣೆ ಆಗಿದೆ. ಅಲ್ಲದೇ, ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಒಕ್ಕಲಿಗ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಬಂದಿವೆ ಎಂದೂ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.