ಬೆಂಗಳೂರು: ‘ಸಮಾಜದಲ್ಲಿ ಬ್ಲಾಕ್ಮೇಲ್ ಮಾಡುವ ಸಂಘಗಳ ಹಾವಳಿ ಹೆಚ್ಚಾಗಿದೆ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ‘ಇಂತಹದ್ದಕ್ಕೆಲ್ಲಾ ಅವಕಾಶ ಸಿಗಬಾರದು. ಸರ್ಕಾರ ಕೂಡಲೇ ಇಂತಹ ಸಂಘಗಳಿಗೆ ಕಡಿವಾಣ ಹಾಕಬೇಕು’ ಎಂದು ಖಡಕ್ಕಾಗಿ ಎಚ್ಚರಿಸಿದೆ.
‘ಕರ್ನಾಟಕ ರಾಜ್ಯ ಎಲ್ಪಿಜಿ ಗ್ರಾಹಕರ ಸಂಘ’ದ ಹೆಸರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠವು, ಅರ್ಜಿದಾರರಾದ ಉಡುಪಿ ಜಿಲ್ಲೆಯ ಬಡಗಬೆಟ್ಟಿನ, ‘ಕರ್ನಾಟಕ ರಾಜ್ಯ ಎಲ್ಪಿಜಿ ಗ್ರಾಹಕರ ಸಂಘ’ದ ಶೀರ್ಷಿಕೆಯನ್ನು ಗಮನಿಸಿ, ‘ಇದೇನಿದು, ಇದ್ಯಾವ ಸಂಘ, ಗ್ರಾಹಕರ ಅನುಮತಿ ಇಲ್ಲದೆ ಈ ಸಂಘ ಅಧಿಕಾರ ಚಲಾಯಿಸುತ್ತಿದೆ. ಇಂತಹ ಸಂಘಗಳ ಹೆಸರಲ್ಲಿ ಬ್ಲಾಕ್ಮೇಲ್ ಮಾಡಬೇಡಿ. ಅಷ್ಟಕ್ಕೂ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ಇಂತಹ ಸಂಘ ಸ್ಥಾಪಿಸಲು ಅವಕಾಶ ಇದೆಯೇ? ಇಂತಹುದ್ದೊಂದು ಸಂಘ ಅಸ್ತಿತ್ವಕ್ಕೆ ಬರಲು ಅವಕಾಶ ಸಿಕ್ಕಿದ್ದಾದರೂ ಹೇಗೆ? ಅವಕಾಶ ಕೊಟ್ಟವರು ಯಾರು? ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ತಾಕೀತು ಮಾಡಿತು.
ಅರ್ಜಿಯಲ್ಲಿ ಸಹಕಾರ ಸಂಘಗಳ ನೋಂದಣಿಗೆ ಸಂಬಂಧಿಸಿದ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ ಈ ಸಂಬಂಧ ವರದಿ ಸಲ್ಲಿಸಿ ಎಂದು ಸರ್ಕಾರದ ವಕೀಲರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.