ನವದೆಹಲಿ: ಮುಂದಿನ 15 ದಿನಗಳಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಖಾತೆಗಳ ಕುರಿತು ಅಭಿವೃದ್ಧಿ ಮುನ್ನೋಟ ಹಾಗೂ ನೀಲನಕ್ಷೆ ಸಿದ್ಧಪಡಿಸುತ್ತೇನೆ ಎಂದು ಕೇಂದ್ರದ ನೂತನ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಉಭಯ ಇಲಾಖೆಗಳ ಅಧಿಕಾರಿಗಳೊಂದಿಗೆ ಕರ್ನಾಟಕ ಭವನದಲ್ಲಿ ಸೋಮವಾರ ರಾತ್ರಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನನ್ನ ಮೇಲೆ ವಿಶ್ವಾಸ ಇಟ್ಟು ಮೋದಿ ಅವರು ಒಳ್ಳೆಯ ಖಾತೆಯನ್ನೇ ನೀಡಿದ್ದಾರೆ. ದೇಶದ ಅಭಿವೃದ್ಧಿಯು ಈ ಖಾತೆಯಲ್ಲಿ ಅಡಗಿದೆ ಎಂಬುದು ನನ್ನ ನಂಬಿಕೆ’ ಎಂದರು.
‘ಇಂಥ ದೊಡ್ಡ ಇಲಾಖೆ ನಿರ್ವಹಣೆ ಮಾಡಬೇಕಿದೆ. ವಿಎಸ್ಎಲ್ ಸೇರಿ ಕೈಗಾರಿಕೆಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಇವೆ. ಇದಕ್ಕೆ ಪರಿಹಾರ ಹುಡುಕಬೇಕಿದೆ. ಯುವಕರಿಗೆ ಉದ್ಯೋಗ ನೀಡಲು ಗಮನ ಕೊಡಬೇಕಿದೆ’ ಎಂದರು.
ತಯಾರಿಕಾ ಕ್ಷೇತ್ರದಲ್ಲಿ ಬಹಳ ನಿರೀಕ್ಷೆಗಳು ಇವೆ. ಇಲಾಖೆಯಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕರ್ನಾಟಕಕ್ಕೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ. ಹಾಗಾಗಿ, ಪ್ರಧಾನಿ ನಮಗೆ ಉತ್ತಮ ಖಾತೆ ನೀಡಿದ್ದಾರೆ ಎಂದರು.
ಎಚ್.ಡಿ.ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಎಂದವರಿಗೆ ಉತ್ತರ ಸಿಕ್ಕಿದೆ. ನಮ್ಮ ಪಕ್ಷ ಪುಟಿದೆದ್ದು ಬಂದಿದೆ. ಕುಮಾರಸ್ವಾಮಿ ರಾಜಕೀಯ ಮುಗಿಯಿತು ಎಂದು ಅಪಪ್ರಚಾರ ನಡೆಸಿದರು. ಯಾವುದೋ ಒಂದು ಶಕ್ತಿ ನಮ್ಮ ಪಕ್ಷಕ್ಕೆ ಬಂದಿದೆ ಎಂದು ಅವರು ಪ್ರತಿಪಾದಿಸಿದರು.
ಕೆಜಿಎಫ್ ಗಣಿ ಪ್ರದೇಶದಲ್ಲಿ 12,000 ಎಕರೆ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಬಗ್ಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಪ್ರಸ್ತಾಪಿಸಿದರು. ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ಗಣಿ ಭೂಮಿ ವ್ಯರ್ಥವಾಗಿ ಉಳಿದಿದೆ ಎಂದು ಸಚಿವರ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.