ನವದೆಹಲಿ: ಪರಿಹಾರಾತ್ಮಕ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ಕರ್ನಾಟಕದ ಸಂಚಿತ ನಿಧಿಯ ಪೈಕಿ ₹363.44 ಕೋಟಿಯನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಖಂಡ್ರೆ, ಈ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಬಳಿಕ ಸಚಿವಾಲಯವು ಹಣ ಬಿಡುಗಡೆ ಮಾಡಿತು.
2019ರ ಫೆಬ್ರುವರಿ 8ರಿಂದ 2022ರ ಮಾರ್ಚ್ 31ರ ಅವಧಿಯಲ್ಲಿ ಕಾಂಪಾ ಹಣದ ಪೈಕಿ ಕೇಂದ್ರ ನಿಧಿಯ ಹಣ ಕಡಿತ ಮಾಡಿಕೊಂಡು ಉಳಿದ ಹಣ ಬಿಡುಗಡೆ ಮಾಡಲಾಗಿದೆ. ಪರಿಹಾರ ಅರಣ್ಯೀಕರಣಕ್ಕೆ ₹209.21 ಕೋಟಿ, ಪ್ರಸ್ತುತ ಅರಣ್ಯದ ಮೌಲ್ಯದ ಆಧಾರದಲ್ಲಿ ₹98.36 ಕೋಟಿ ಮತ್ತು ಇತರ ವೆಚ್ಚಕ್ಕಾಗಿ ₹55.86 ಕೋಟಿ ವರ್ಗಾವಣೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಖಂಡ್ರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.