ಮೈಸೂರು: ಸಮಗ್ರ ಶಿಕ್ಷಣ ಅಭಿಯಾನದ ಅಡಿ ನೀಡುವ ಅನುದಾನದಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ದೂರಿದರು.
'ಯೋಜನೆ ಅಡಿ ಪ್ರತಿ ಮಗುವಿಗೆ ಕೇಂದ್ರ ಸರ್ಕಾರವು ತಮಿಳುನಾಡು, ಗುಜರಾತ್ ಮೊದಲಾದ ರಾಜ್ಯಗಳಿಗೆ ವಾರ್ಷಿಕ 5500-6000 ರೂಪಾಯಿ ನೀಡುತ್ತಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಪ್ರತಿ ಮಗುವಿಗೆ 2400-2800 ರೂಪಾಯಿ ನಿಗದಿ ಪಡಿಸಿದೆ. ಆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಅಧಿಕಾರಿಗಳ ತಂಡ ದೆಹಲಿಗೆ ತೆರಳಿ ಈ ಸಂಬಂಧ ಮನವಿ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ಭೇಟಿಗೆ ನಾನೂ ಸಮಯ ಕೇಳಿದ್ದೇನೆ. ಆದರೆ ಈವರೆಗೆ ಅವಕಾಶ ನೀಡಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಗಿ ಮಾಲ್ಟ್
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನೊಂದಿಗೆ ರಾಗಿ ಮಾಲ್ಟ್ ವಿತರಣೆಗೆ ಇನ್ನು 10-15 ದಿನದಲ್ಲಿ ಚಾಲನೆ ನೀಡಲಾಗುವುದು. ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ಹಾಗೂ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುವುದು. ಈಗ ವಾರಕ್ಕೆ ಒಂದು ದಿನ ಮೊಟ್ಟೆ ನೀಡುತ್ತಿದ್ದು, ಇನ್ನೊಂದು ದಿನ ಹೆಚ್ಚಿಗೆ ನೀಡುವುದರಿಂದ 160 ಕೋಟಿ ಹೆಚ್ಚುವರಿ ಹಣ ಬೇಕಾಗುತ್ತದೆ. ಇದನ್ನು ಸಿಎಸ್ ಆರ್ ನಿಧಿಯಿಂದ ಸಂಗ್ರಹಿಸಲಾಗುವುದು ಎಂದರು.
ನೀಟ್ ತರಬೇತಿ: ಸರ್ಕಾರದಿಂದಲೇ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ನೀಟ್ ( NEET) ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಬಜೆಟ್ ನಲ್ಲಿ ಇದನ್ನು ಮುಖ್ಯಮಂತ್ರಿಗಳು ಘೋಷಿಸುವ ಸಾಧ್ಯತೆ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.