ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ, ಅನುದಾನದ ಪಾಲಿನಲ್ಲಿ ಮಾತ್ರ ಅನ್ಯಾಯ ಮಾಡಿದ್ದಲ್ಲ. ಕನ್ನಡ ಭಾಷೆಯ ಬೆಳವಣಿಗೆಗೆ ಅನುದಾನ ನೀಡುವಲ್ಲಿಯೂ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂಬುದನ್ನು ಖಾತ್ರಿಪಡಿಸಲು ತರಲಾದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2024’ ಕುರಿತು ವಿಧಾನಪರಿಷತ್ತಿನಲ್ಲಿ ಮಂಗಳವಾರ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಈ ವಿಷಯದಲ್ಲಿ ಬಿಜೆಪಿ ಸದಸ್ಯರು ಕನ್ನಡ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.
ಮಸೂದೆ ಕುರಿತು ಮಾತನಾಡಿದ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯ ನೀಡಿದೆ. ಪ್ರತಿವರ್ಷ ಹಿಂದಿಗೆ ₹1,500 ಕೋಟಿ, ಸಂಸ್ಕೃತಕ್ಕೆ ₹400 ಕೋಟಿ ಕೊಟ್ಟರೆ ಕನ್ನಡಕ್ಕೆ ಕೇವಲ ₹3 ಕೋಟಿ ನೀಡಲಾಗುತ್ತಿದೆ. ಸಂಸ್ಕೃತ ಮಾತನಾಡುವವರು ದೇಶದಲ್ಲಿ 50 ಸಾವಿರ ಜನರಿದ್ದಾರೆ. ಆ ಭಾಷೆಗೆ ₹400 ಕೋಟಿ, ಏಳು ಕೋಟಿ ಜನ ಮಾತನಾಡುವ ಕನ್ನಡಕ್ಕೆ ₹3 ಕೋಟಿ ಮಾತ್ರ. ದೇಶದಲ್ಲಿ 21 ಭಾಷೆಗಳಲ್ಲಿ ಸಾಂವಿಧಾನಿಕ ಮಾನ್ಯತೆ ನೀಡಲಾಗಿದ್ದು, ಎಲ್ಲ ಭಾಷೆಗಳನ್ನೂ ಕೇಂದ್ರ ಸರ್ಕಾರ ಒಂದೇ ರೀತಿ ನೋಡಬೇಕು ಎಂದು ಒತ್ತಾಯಿಸಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ 108 ಭಾಷೆಗಳನ್ನು ಮಾತನಾಡುವ ಜನ ಇದ್ದಾರೆ. ಅತಿ ಹೆಚ್ಚು ಭಾಷೆಗಳು ಚಾಲ್ತಿಯಲ್ಲಿರುವ ದೇಶದ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದರು.
ಮಸೂದೆಗೆ ಅನುಮೋದನೆ ಕೋರಿ ಮಾತನಾಡಿದ ಸಚಿವ ತಂಗಡಗಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ನೀಡಲಾಗಿದ್ದರೂ ಅನುದಾನವನ್ನು ಕೊಡುತ್ತಿಲ್ಲ. ನಮ್ಮ ಮೂಗಿಗೆ ತುಪ್ಪ ಸವರುವಂತೆ ಅನುದಾನ ಕೊಡಲಾಗುತ್ತಿದೆ. ಲೋಕಸಭೆ ಚುನಾವಣೆ ಬರುತ್ತಿದ್ದು, ಅನುದಾನ ಕೊಡಿಸುವ ಯತ್ನವನ್ನು ಪೂಜಾರಿ ಸಾಹೇಬರು ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉದ್ದೇಶಿಸಿ ಹೇಳಿದರು.
ಪ್ರಧಾನಿಯವರನ್ನು ಏಕವಚನದಲ್ಲಿ ಬೈದು, ಅನುದಾನ ಕೊಡಿ ಎಂದರೆ ಹೇಗೆ ಎಂದು ಪೂಜಾರಿ ಪ್ರಶ್ನಿಸಿದರು. ಅನುದಾನ ಕೊಡದೇ ಇದ್ದರೆ ಬೈಯದೇ ಇನ್ನೇನು ಮಾಡುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೇಳಿದರು.
ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಉಮಾಶ್ರೀ, ತೇಜಸ್ವಿನಿಗೌಡ, ತಿಪ್ಪೇಸ್ವಾಮಿ, ಎಸ್.ವಿ. ಸಂಕನೂರ, ತಳವಾರ ಸಾಬಣ್ಣ , ಶಾಂತರಾಮ ಸಿದ್ದಿ, ಹೇಮಲತಾ ನಾಯಕ್, ಡಾ. ತಿಮ್ಮಯ್ಯ ಮಾತನಾಡಿದರು.
ಬಳಿಕ ಮಸೂದೆಗೆ ಅನುಮೋದನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.