ರಾಮನಗರ: ‘ಚನ್ನಪಟ್ಟಣ ಉಪ ಚುನಾವಣೆ ಅಖಾಡಕ್ಕಿಳಿದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ವಾಮಮಾರ್ಗದಲ್ಲಿ ಕ್ಷೇತ್ರವನ್ನು ಗೆಲ್ಲಲು ಮುಂದಾಗಿದ್ದಾರೆ. ಅವರ ಮೊದಲ ಭೇಟಿಯಲ್ಲೇ ಚುನಾವಣಾ ಅಕ್ರಮ ಎಸಗುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೊಗೇಶ್ವರ್ ಆರೋಪಿಸಿದರು.
‘ಅಧಿಕಾರಿಗಳೊಂದಿಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೋಪ್ಯ ಸಭೆ ನಡೆಸಿರುವ ಶಿವಕುಮಾರ್, ಒಂದೇ ಕೋಮಿಗೆ ಸೇರಿದ ಎಂಟು ಸಾವಿರ ಮಂದಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಈ ವಿಷಯ ಹೊರಗೆ ಗೊತ್ತಾಗಬಾರದೆಂದು, ಸಭೆಗೆ ಅಧಿಕಾರಿಗಳ ಮೊಬೈಲ್ ನಿರ್ಬಂಧಿಸಿ, ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಿದ್ದರು’ ಎಂದು ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಡಿಕೆಶಿ ಸ್ಪರ್ಧೆಯನ್ನು ಸ್ವಾಗತಿಸುವೆ. ಆದರೆ, ಸ್ಪರ್ಧೆಯು ಆರೋಗ್ಯಕರವಾಗಿರಬೇಕು. ಡಿಸಿಎಂ ಕ್ಷೇತ್ರ ಭೇಟಿ ಮತ್ತು ನಡವಳಿಕೆ ಗಮನಿಸಿದರೆ ಚುನಾವಣೆ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಹಾಗಾಗಿ, ಚುನಾವಣಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೈತ್ರಿ ನಾಯಕರು ಚುನಾವಣಾ ಆಯೋಗಕ್ಕೆ ಸದ್ಯದಲ್ಲೇ ಮನವಿ ಸಲ್ಲಿಸುತ್ತೇವೆ’ ಎಂದರು.
ಕೊನೆ ಅಧ್ಯಾಯವಾಗಲಿದೆ: ‘ಚನ್ನಪಟ್ಟಣದಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಶಿವಕುಮಾರ್, ಇಲ್ಲಿಂದ ರಾಜಕೀಯದ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರವು ಮೈತ್ರಿ ಪಕ್ಷಗಳ ನೆಲೆಯಾಗಿರುವುದರಿಂದ ಇದೇ ಚುನಾವಣೆ ಡಿಕೆಶಿ ರಾಜಕೀಯದ ಕೊನೆಯ ಅಧ್ಯಾಯವಾಗಲಿದೆ. ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಅವರ ಬೆಂಬಲಿಗರ ಘೋಷಣೆಗಳೇ ಅವರಿಗೆ ಮುಳುವಾಗಲಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಕನಕಪುರಕ್ಕೆ ಚನ್ನಪಟ್ಟಣವನ್ನು ಯಾವುದೇ ಕಾರಣಕ್ಕೂ ಹೋಲಿಸಬಾರದು. ಕನಕಪುರವು ಕೊಲೆ, ಬೆದರಿಕೆ, ದರ್ಪ, ದೌರ್ಜನ್ಯಕ್ಕೆ ಮಾದರಿಯಾದುದೇ ಹೊರತು, ಬೊಂಬೆನಾಡಿನಂತೆ ಆರ್ಥಿಕ ಸಮೃದ್ಧಿ, ತಲಾ ಆದಾಯ ವೃದ್ಧಿ, ನೀರಾವರಿ ಕ್ರಾಂತಿಯಂತಹ ಅಭಿವೃದ್ಧಿಗೆ ಹೆಸರಾಗಿಲ್ಲ. ತಮ್ಮ ವಿರೋಧಿಗಳನ್ನು ಬಗ್ಗು ಬಡಿದು ಸಹೋದರರು ಸ್ಥಾಪಿಸಿರುವ ಕನಕಪುರ ರಿಪಬ್ಲಿಕ್ ಮಾದರಿ, ಇಲ್ಲಿಗೆ ಬರಲು ಬಿಡುವುದಿಲ್ಲ’ ಎಂದು ಸವಾಲು ಹಾಕಿದರು.
ರಾಜಕೀಯ ಗಿಮಿಕ್: ‘ಜನ ಕೊಟ್ಟಿರುವ ಅಧಿಕಾರ ಶಕ್ತಿಯಿಂದ ಚನ್ನಪಟ್ಟಣ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯುವೆ ಎನ್ನುವ ಡಿಕೆಶಿ, ಹಿಂದೆ ಚನ್ನಪಟ್ಟಣ ಭಾಗವನ್ನು ಪ್ರತಿನಿಧಿಸಿದ್ದರೂ ಯಾಕೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಇಷ್ಟು ವರ್ಷ ತಿರುಗಿ ನೋಡದವರು ಉಪ ಚುನಾವಣೆ ಸಲುವಾಗಿ ಜನರ ಮುಂದೆ ಹೊಸ ರಾಜಕೀಯ ನಾಟಕವಾಡಲು ಬಂದಿದ್ದಾರೆ. ಅವರ ಗಿಮಿಕ್ಗೆ ಇಲ್ಲಿನ ಜನ ಮರುಳಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಡಿ.ಕೆ. ಸುರೇಶ್ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಮಾತುಗಳು ಕೇಳಿ ಬರುತ್ತಿದ್ದವು. ಈಗ ಅವರ ಅಣ್ಣ ಸ್ಪರ್ಧಿಸಲು ಮುಂದಾಗಿರುವುದನ್ನು ನೋಡಿದರೆ ಸುರೇಶ್ ಅಸಮರ್ಥ ಎಂದು ಅವರೇ ಒಪ್ಪಿಕೊಂಡಂತಲ್ಲವೆ?’ ಎಂದು ಟಾಂಗ್ ನೀಡಿದರು.
‘ಗ್ರಾಮಾಂತರದ ಸೋಲಿನೊಂದಿಗೆ ತಮ್ಮನ ದೌರ್ಜನ್ಯ ನಿಂತಿತು ಎಂದುಕೊಂಡಿದ್ದೆವು. ಆದರೆ, ಇದೀಗ ಅಣ್ಣನ ದೌರ್ಜನ್ಯ ಶುರುವಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ದೌರ್ಜನ್ಯಕ್ಕೆ ನಾನು ಮತ್ತು ಕುಮಾರಸ್ವಾಮಿ ಅವಕಾಶ ಕೊಡುವುದಿಲ್ಲ. ಕ್ಷೇತ್ರ ನಮ್ಮ ಪರವಾಗಿದ್ದು, ಗ್ರಾಮಾಂತರದ ಫಲಿತಾಂಶ ಇಲ್ಲೂ ಪುನರಾವರ್ತನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ನಗರ ಅಧ್ಯಕ್ಷ ಶಿವಕುಮಾರ್ ಆರ್., ಮುಖಂಡರಾದ ವಿ.ಬಿ. ಚಂದ್ರು, ಜಯಕುಮಾರ್ ಹಾಗೂ ಇತರರು ಇದ್ದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಅವರ ಪಕ್ಷದೊಳಗಿನ ಶಾಸಕರ ವಿಶ್ವಾಸ ಪಡೆದರೆ ಸಾಕು. ಅದಕ್ಕಾಗಿ, ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದುಕೊಂಡಿದ್ದರೆ, ಈ ಚುನಾವಣೆಯು ಅವರ ರಾಜಕೀಯದ ಕೊನೆಯ ಅಧ್ಯಾಯವಾಗಲಿದೆ– ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ
‘ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾರಣಕ್ಕಾಗಿ ಮೈತ್ರಿ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ನಾಯಕರು ಅವಕಾಶ ಕೊಟ್ಟರೆ ನಾನು ಸ್ಪರ್ಧೆ ಮಾಡುವೆ. ಇಲ್ಲದಿದ್ದರೆ, ಯಾರೇ ಅಭ್ಯರ್ಥಿಯಾದರೂ ಅವರ ಪರವಾಗಿ ಕೆಲಸ ಮಾಡುವೆ. ಚಿಹ್ನೆ ನಮಗೆ ಮುಖ್ಯವಲ್ಲ. ಒಟ್ಟಿನಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬೇಕಷ್ಟೆ. ಕ್ಷೇತ್ರದ ಗೆಲುವಿಗಾಗಿ ಪಕ್ಷದ ನಾಯಕರು ಶೀಘ್ರ ಸಭೆ ನಡೆಸಿ ಚರ್ಚಿಸಲಿದ್ದಾರೆ. ಮುಂದಿನ ವಾರದಿಂದ ನಾವೂ ಚುನಾವಣೆ ತಯಾರಿ ಶುರು ಮಾಡಲಿದ್ದೇವೆ’ ಎಂದ ಯೋಗೇಶ್ವರ್, ತಾವು ಸಹ ಕ್ಷೇತ್ರದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.