ADVERTISEMENT

ಮುಖ್ಯಮಂತ್ರಿ ಬದಲಾವಣೆ ಚರ್ಚೆ ವ್ಯರ್ಥ ಪ್ರಯತ್ನ: ಮಾಜಿ ಸಂಸದ ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 8:07 IST
Last Updated 9 ಸೆಪ್ಟೆಂಬರ್ 2024, 8:07 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಬೆಂಗಳೂರು: ‘ಮುಖ್ಯಮಂತ್ರಿ  ಬದಲಾವಣೆ ಚರ್ಚೆ ವ್ಯರ್ಥ ಪ್ರಯತ್ನ. ಕೆಲವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರಬಹುದು. ಆದರೆ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಚ್ಯುತಿ ಬರುವುದಿಲ್ಲ. ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಹೈಕಮಾಂಡ್ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದೆ’ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಪಕ್ಷ, ಎಲ್ಲ ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ. ಅಷ್ಟೇ ಏಕೆ, ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದಾಗಿ ಸ್ಪಷ್ಟವಾಗಿ ಹೇಳಿದೆ’ ಎಂದರು.

‘ಬಿಜೆಪಿಯವರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದರು.

ADVERTISEMENT

‘ಒಂದಿಬ್ಬರು ಮೂವರಿಗೆ ಮುಖ್ಯಮಂತ್ರಿ ಆಸೆ ಇರಬಹುದು ಅವರೆಲ್ಲರೂ ಹಿರಿಯ ನಾಯಕರೇ. ಆದರೆ, ಖಾಲಿ ಇಲ್ಲದ ಹುದ್ದೆಗೆ ಪೈಪೋಟಿ ನಡೆಸುವುದು ಸೂಕ್ತವಲ್ಲ. ಎಲ್ಲ ಶಾಸಕರ ಅಭಿಪ್ರಾಯ ಆಧರಿಸಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲೂ ಮುಖ್ಯಮಂತ್ರಿಯ ಬೆನ್ನಿಗೆ ನಿಲ್ಲುವುದಾಗಿ ಹೈಕಮಾಂಡ್ ಹೇಳಿದೆ’ ಎಂದರು.

‘ಕೆಲವರು ರಾಜಕಾರಣದಲ್ಲಿ ಗೊಂದಲ ಸೃಷ್ಟಿಸಬೇಕು ಎಂದೇ ಇರುತ್ತಾರೆ. ಗೊಂದಲಗಳಿಂದಲೇ ನಾಯಕರಾಗಬೇಕು ಎಂದು ಕೆಲವರಿಗೆ ಇರುತ್ತದೆ. ಕೆಲಸ ಮಾಡಿ ನಾಯಕರಾಗಬೇಕು ಎಂದು ಇರುವುದಿಲ್ಲ’ ಎಂದು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಹಿರಂಗವಾಗಿ ಮಾತನಾಡುವ ತಮ್ಮ ಪಕ್ಷದ ನಾಯಕರ ವಿರುದ್ಧ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮಗೆ ಯೋಗೇಶ್ವರ್ ಅವಶ್ಯಕತೆ ಇಲ್ಲ. ನಾವ್ಯಾಕೆ ಯೋಗೇಶ್ವರ್ ಅವರಿಗೆ ಮಣೆ ಹಾಕಬೇಕು? ಚನ್ನಪಟ್ಟಣ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಿದ್ದೇವೆ. ಕಾರ್ಯಕರ್ತರು ಎಲ್ಲರೂ ಉತ್ಸಾಹದಲ್ಲಿ ಇದ್ದಾರೆ. ಶೀಘ್ರದಲ್ಲಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಲಿದೆ. ಆಗ ಅಚ್ಚರಿಯ ಅಭ್ಯರ್ಥಿ ಯಾರೂ ಎಂದು ನಿಮಗೇ ಗೊತ್ತಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.