ADVERTISEMENT

ಮಹಾಕಾವ್ಯ ಬರೆದವರೆಲ್ಲಾ ತಳಸಮುದಾಯದವರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:51 IST
Last Updated 17 ಅಕ್ಟೋಬರ್ 2024, 14:51 IST
<div class="paragraphs"><p>ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ರಾಜಶೇಖರ ತಳವಾರ, ಕಿಲಾರಿ ಜೋಗಯ್ಯ,&nbsp;ರತ್ನಮ್ಮ ಬಿ. ಸೋಗಿ, ಕೆ.ಎಸ್.ಮೃತ್ಯುಂಜಯ ಮತ್ತು&nbsp;ಎಸ್. ರತ್ನಮ್ಮ ಅವರಿಗೆ&nbsp; ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು</p></div>

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ರಾಜಶೇಖರ ತಳವಾರ, ಕಿಲಾರಿ ಜೋಗಯ್ಯ, ರತ್ನಮ್ಮ ಬಿ. ಸೋಗಿ, ಕೆ.ಎಸ್.ಮೃತ್ಯುಂಜಯ ಮತ್ತು ಎಸ್. ರತ್ನಮ್ಮ ಅವರಿಗೆ  ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು

   

–ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ದೇಶದಲ್ಲಿ ಮಹಾಕಾವ್ಯಗಳನ್ನು ಬರೆದವರೆಲ್ಲಾ ತಳಸಮುದಾಯದವರೇ. ಮಹಾಭಾರತ ಬರೆದ ವ್ಯಾಸಮುನಿ ಬೆಸ್ತ ಸಮುದಾಯದವರು, ಶಾಕುಂತಲ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು, ರಾಮಾಯಣ ಬರೆದದ್ದು ಮಹರ್ಷಿ ವಾಲ್ಮೀಕಿ. ಆದರೆ ಅವರ ಪ್ರತಿಭೆಯನ್ನು ನಿರಾಕರಿಸುವ ಉದ್ದೇಶದಿಂದ ಅವರ ಸುತ್ತ ಒಂದು ಕತೆಯನ್ನು ಕಟ್ಟಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ವಿಧಾನಸೌಧದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆ ಕಾಲದಲ್ಲಿ ತಳಸಮುದಾಯವರಿಗೆ ಶಿಕ್ಷಣ ನಿಷಿದ್ಧವಾಗಿತ್ತು. ಅಂಥದ್ದರಲ್ಲಿ ಸಂಸ್ಕೃತ ಕಲಿತು ಇವರೆಲ್ಲಾ ಮಹಾಕಾವ್ಯಗಳನ್ನು ಬರೆದಿದ್ದಾರೆ. 24,000 ಶ್ಲೋಕಗಳಿರುವ ರಾಮಾಯಣ ಬರೆದ ವಾಲ್ಮೀಕಿ ದರೋಡೆ ಮಾಡುತ್ತಿದ್ದರು ಎಂದು ನಮಗೆಲ್ಲಾ ಹೇಳಿಕೊಡುತ್ತಾ ಬರಲಾಗಿದೆ. ಆದರೆ ದರೋಡೆ ಮಾಡಿಕೊಂಡು ಓಡಾಡುತ್ತಿದ್ದದ್ದೇ ನಿಜವಾಗಿದ್ದರೆ, ಅವರಿಂದ ಮಹಾಕಾವ್ಯ ಬರೆಯಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದರು.

‘ತಳಸಮುದಾಯದವರ ಪ್ರತಿಭೆ ನಿರಾಕರಿಸುವ ಉದ್ದೇಶದಿಂದಲೇ ಅಂದಿನ ಸಮಾಜ ಇಂತಹ ಕತೆಗಳನ್ನು ಕಟ್ಟುತ್ತಾ ಬಂದಿದೆ’ ಎಂದರು.

‘ನಿಷೇಧದ ಮಧ್ಯೆಯೂ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು. ಸಂವಿಧಾನವನ್ನು ಅಂಗೀಕರಿಸುವ ಮುನ್ನಾ ದಿನ ಬಾಬಾಸಾಹೇಬ್‌ ಅಂಬೇಡ್ಕರ್ ಅವರು, ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕೆಂದರೆ ಶಿಕ್ಷಣ ಬೇಕು ಎಂದು ಹೇಳಿದ್ದರು. ಹೀಗಾಗಿಯೇ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ತಳ ಸಮುದಾಯಗಳು ಮುಂದಕ್ಕೆ ಬರಬೇಕು ಎಂದೇ ಅವರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ’ ಎಂದರು.

‘ಬಿಜೆಪಿಯವರು ಅಸಮಾನತೆ, ಜಾತಿವಾದ ಇಲ್ಲ ಎಂದೆಲ್ಲಾ ಹೇಳುತ್ತಾರೆ. ಅದನ್ನು ಹೋಗಲಾಡಿಸಲು ಏನಾದರೂ ಕೆಲಸ ಮಾಡಿದ್ದಾರಾ? ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಂದು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪಯೋಜನೆಗಳನ್ನು ಕಡ್ಡಾಯ ಮಾಡಲು ಕಾಯ್ದೆ ಜಾರಿಗೆ ತಂದಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷವಾಗುತ್ತಿದೆ, ಇಂತಹ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ. ಬಿಜೆಪಿ ಆಡಳಿತದಲ್ಲಿರುವ ಒಂದಾದರೂ ರಾಜ್ಯದಲ್ಲಿ ಜಾರಿಗೆ ತಂದಿದ್ದಾರಾ’ ಎಂದು ಪ್ರಶ್ನಿಸಿದರು.

‘ಮಹರ್ಷಿ ವಾಲ್ಮೀಕಿ ಸಮಸಮಾಜದ ಪ್ರತಿಪಾದಕರಾಗಿದ್ದರು. ಅದನ್ನೇ ಅವರು ರಾಮರಾಜ್ಯ ಎಂದು ಕರೆದರು. ಮಹಾತ್ಮ ಗಾಂಧಿ ಹೇಳಿದ ರಾಮರಾಜ್ಯವೂ ಅದೇ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲೆಂದೇ ನಮ್ಮ ಸರ್ಕಾರ ದುಡಿಯತ್ತಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಮಾಲಾರ್ಪಣೆ: ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಶಾಸಕರ ಭವನದ ಎದುರು ಇರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.

ವಾಲ್ಮೀಕಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ರಾಯಚೂರು ವಿಶ್ವವಿದ್ಯಾಲಯವನ್ನು ‘ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲಾಗುತ್ತದೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಕೇಳಿದಾಕ್ಷಣ ಅನುದಾನ ನೀಡಿದರು’

‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ನಂತರ ನಿಗಮದಲ್ಲಿ ಹಣ ಇಲ್ಲದಂತಾಗಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆವು. ಅವರು ಸ್ವಲ್ಪವೂ ತಡಮಾಡದೆ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿಸಿದರು’ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

‘ತನಿಖಾ ತಂಡವು ನಿಗಮದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚುವರಿ ಅನುದಾನ ದೊರೆತ ಕಾರಣದಿಂದ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.