ADVERTISEMENT

ಕಂಪ್ಯೂಟರ್ ಆಧಾರಿತ ಸಿಇಟಿ ಪರೀಕ್ಷೆ: ಸಚಿವ ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:12 IST
Last Updated 14 ಜುಲೈ 2024, 16:12 IST
<div class="paragraphs"><p>ವೆಬ್‌ ಕಾಸ್ಟಿಂಗ್‌ ವ್ಯವಸ್ಥೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ವೀಕ್ಷಿಸಿದರು. ಈ ವ್ಯವಸ್ಥೆಯನ್ನು ಅಳವಡಿಸಿದ ಇನ್ನೋವೆಟಿವ್‌ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿದಿತ್‌ ದೀಕ್ಷಿತ್, ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಜಿ. ಜಗದೀಶ್‌, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಇದ್ದರು&nbsp; &nbsp;</p></div>

ವೆಬ್‌ ಕಾಸ್ಟಿಂಗ್‌ ವ್ಯವಸ್ಥೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ವೀಕ್ಷಿಸಿದರು. ಈ ವ್ಯವಸ್ಥೆಯನ್ನು ಅಳವಡಿಸಿದ ಇನ್ನೋವೆಟಿವ್‌ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿದಿತ್‌ ದೀಕ್ಷಿತ್, ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಜಿ. ಜಗದೀಶ್‌, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಇದ್ದರು   

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿಸುವ (ಸಿಬಿಟಿ) ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ತಿಳಿಸಿದರು.

ADVERTISEMENT

‘ಕೆ-ಸೆಟ್ 23’ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ಪ್ರಮಾಣಪತ್ರ ಶನಿವಾರ ವಿತರಿಸಿ ಮಾತನಾಡಿದ ಅವರು, ‘ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಲ್ಲಿನ ಸಿಇಟಿಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಂಪ್ಯೂಟರ್ ಆಧಾರಿತವಾಗಿ ಸಿಇಟಿ ನಡೆಸಿದ್ದ ಸಂಸ್ಥೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಾಗಿದೆ’ ಎಂದರು.‌

‘ಸಿಬಿಟಿ ವ್ಯವಸ್ಥೆಯ ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಈ ಸಂಪನ್ಮೂಲದ ಸದುಪಯೋಗ ಪೂರ್ಣ ಪ್ರಮಾಣದಲ್ಲಿ ಆಗುತ್ತದೆಯೇ ಎಂಬ ಬಗ್ಗೆಯೂ ಆಲೋಚಿಸಬೇಕಾಗುತ್ತದೆ. ಸಾಧಕ– ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಿಇಟಿ ಅರ್ಜಿ ತುಂಬುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ, ಅರ್ಜಿ ತುಂಬುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ನೀಡಲು ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. ಜೊತೆಗೆ, ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡಿಸುವ ಉದ್ದೇಶವೂ ಇದೆ’ ಎಂದರು.

‘ಕೆ-ಸೆಟ್‌ನಲ್ಲಿ ಅರ್ಹರಾದವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಆದ್ಯತೆ ನೀಡಲಿದೆ. ಮುಂಬರುವ ದಿನಗಳಲ್ಲಿ ಮಂಜೂರಾತಿ ಹುದ್ದೆಗಳು ಹಾಗೂ ಅತಿಥಿ ಬೋಧಕರ ನಡುವಿನ ಅಂತರ ತಗ್ಗಿಸುವುದಕ್ಕೂ ಒತ್ತು ನೀಡಲಾಗುವುದು’ ಎಂದರು.

‘ವೆಬ್ ಕಾಸ್ಟಿಂಗ್’ಗೆ ಮೆಚ್ಚುಗೆ: ‘ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮುಖಚಹರೆ ಗುರುತಿಸುವಿಕೆ, ಬೆರಳಚ್ಚು ಬಳಕೆ, ಬಯೋಮೆಟ್ರಿಕ್ಸ್ ಮತ್ತಿತರ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು, ವೆಬ್ ಕಾಸ್ಟಿಂಗ್ ಮೂಲಕ ನಿಯಂತ್ರಣ ಮಾಡುತ್ತಿರುವುದು ಉತ್ತಮ ಕ್ರಮ’ ಎಂದು ಸಚಿವರು ಅಭಿಪ್ರಾಯಪಟ್ಟರು.

ನಿಗಮ, ಮಂಡಳಿಗಳ ಖಾಲಿ ಹುದ್ದೆಗಳನ್ನು ತುಂಬಲು ಶನಿವಾರ ಆರಂಭವಾದ ಎರಡು ದಿನಗಳ ಪರೀಕ್ಷೆಗೆ ಇಲ್ಲಿನ ಕಮಾಂಡ್ ಸೆಂಟರ್‌ನಲ್ಲಿ ಮೊದಲ ಬಾರಿ ಅಳವಡಿಸಲಾಗಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅವರು ವೀಕ್ಷಿಸಿದರು.

ರಾಜ್ಯದಲ್ಲಿ ಹೊಸದಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಉದ್ದೇಶ ಇಲ್ಲ. ಇದೇ ಅಭಿಪ್ರಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೂ ಆಗಿದೆ
ಡಾ.ಎಂ.ಸಿ. ಸುಧಾಕರ್ ಸಚಿವರು ಉನ್ನತ ಶಿಕ್ಷಣ

‘ಸುಪ್ರೀಂ ತೀರ್ಪಿನ ನಂತರ ತೀರ್ಮಾನ’

‘ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಸಚಿವರು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಒಮ್ಮೆಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯಲಾಗುತ್ತಿದೆ’ ಎಂದರು. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಅಂಕ ಮಾತ್ರ ಪರಿಗಣಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ‘ದ್ವಿತೀಯ ಪಿಯುಸಿಯ ಶೇ 50ರಷ್ಟು ಅಂಕವನ್ನೂ ರ‍್ಯಾಂಕ್‌ಗೆ ಪರಿಗಣಿಸಿದರೆ ಉತ್ತಮ’ ಎಂದು ಅಭಿಪ್ರಾಯಪಟ್ಟರು.

ಕೆಇಎ: ಪರೀಕ್ಷೆಗೆ ಶೇ 34.5ರಷ್ಟು ಹಾಜರು

ಬೆಂಗಳೂರು: ಬಿಎಂಟಿಸಿ ಕೆಕೆಆರ್‌ಟಿಸಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಅರ್ಜಿ‌ ಸಲ್ಲಿಸಿದ್ದ ಒಟ್ಟು 8526 ಅಭ್ಯರ್ಥಿಗಳಲ್ಲಿ 2905 ಮಂದಿ (ಶೇ 34.5ರಷ್ಟು) ಪರೀಕ್ಷೆಗೆ ಹಾಜರಾಗಿದ್ದಾರೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.

ಬೆಂಗಳೂರು ಕಲಬುರಗಿ ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯನ್ನು ಈ ಬಾರಿ ವೆಬ್‌ ಕಾಸ್ಟಿಂಗ್ ಮಾಡುವ ಮೂಲಕ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು.

ಸಚಿವರು ಗರಂ: ಕೆಇಎ ಕಾಮಂಡ್ ಸೆಂಟರ್‌ನಲ್ಲಿ ವೆಬ್ ಕಾಸ್ಟಿಂಗ್‌ನ್ನು ಸಚಿವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಧಾರವಾಡ ಕೇಂದ್ರದ ಪರೀಕ್ಷಾ ಮೇಲ್ವಿಚಾರಕರೊಬ್ಬರು ಅಭ್ಯರ್ಥಿಯ ಸಹಿಯನ್ನು ಅವರ ಪಕ್ಕದಲ್ಲಿ ಕುಳಿತು ಹಾಕಿಸಿಕೊಂಡಿದ್ದನ್ನು ಗಮನಿಸಿದ ಸಚಿವರು ಹಾಟ್‌ಲೈನ್‌ನಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿ ಕುಳಿತು ಸಹಿ ಹಾಕಿಸಿಕೊಳ್ಳುವ ಅಗತ್ಯ ಏನಿತ್ತು ಎಂದೂ ಪ್ರಶ್ನಿಸಿದರು. ‘ಕೆಸೆಟ್-2024’ ನ. 24ಕ್ಕೆ 2024ನೇ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) ನವೆಂಬರ್ 24ರಂದು ಪರೀಕ್ಷೆ ನಡೆಯಲಿದೆ. ಜುಲೈ 22ರಿಂದ ಆಗಸ್ಟ್ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 26 ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ. 

ಸಿಇಟಿ– ವಿವೇಚನೆ ಬಳಸಿ ಉತ್ತರಿಸುವ ಪ್ರಶ್ನೆಗಳೂ ಇರಲಿದೆ’

‘ಇನ್ನು ಮುಂದೆ ಸಿಇಟಿಯಲ್ಲಿ ಪಠ್ಯಕ್ರಮದಲ್ಲಿ ಇಲ್ಲದ ಆದರೆ ವಿವೇಚನೆ ಬಳಸಿ ಉತ್ತರಿಸುವ ಪ್ರಶ್ನೆಗಳೂ ಇರಲಿದೆ’ ಎಂದು ಸಚಿವರು ಹೇಳಿದರು.  ಈ ಬಾರಿಯ ಸಿಇಟಿಯಲ್ಲಿ ಪಠ್ಯಗಳಿಗೆ ಹೊರತಾದ ಪ್ರಶ್ನೆಗಳು ಕಾಣಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಗಳು ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಆ ಪ್ರಶ್ನೆಗಳನ್ನು ಕೈಬಿಟ್ಟು ಅಂಕಗಳನ್ನು ನೀಡಲಾಗಿತ್ತು.  ‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ವಿದ್ಯಾರ್ಥಿಗಳು ವಿವೇಚನೆ ಬಳಸಿ ಉತ್ತರಿಸುವ ಪ್ರಶ್ನೆಗಳನ್ನು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಪಠ್ಯಕ್ರಮವನ್ನೇ ಅನುಸರಿಸಲು ಇದು ಮಂಡಳಿ ಪರೀಕ್ಷೆಯಲ್ಲ. ಪ್ರಶ್ನೆ ಪತ್ರಿಕೆ ತಯಾರಿಸುವವರಿಗೂ ನಾವು (ಕೆಇಎ) ಕೆಲವು ಮಾರ್ಗಸೂಚಿಗಳನ್ನು ನೀಡುತ್ತೇವೆ. ಸಿಇಟಿ– 2025ಕ್ಕೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಾಕಲಾಗುವುದು. ಆಕ್ಷೇಪಣೆ ಇದ್ದವರು ಸಲ್ಲಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.