ADVERTISEMENT

ಸಾಹಿತಿ, ವಿದ್ವಾಂಸರನ್ನು ಗುಲಾಮರಾಗಿಸಿಕೊಂಡ ಕಾಂಗ್ರೆಸ್‌: ವಿ.ಸುನಿಲ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 11:40 IST
Last Updated 16 ಜೂನ್ 2024, 11:40 IST
ವಿ.ಸುನಿಲ್‌ಕುಮಾರ್‌
ವಿ.ಸುನಿಲ್‌ಕುಮಾರ್‌   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಸಾಹಿತಿಗಳು ಮತ್ತು ವಿದ್ವಾಂಸರನ್ನು ತನ್ನ ಧೋರಣೆಯ ಗುಲಾಮರನ್ನಾಗಿಸಿಕೊಂಡಿದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌ ಕಿಡಿಕಾರಿದ್ದಾರೆ.

‘ಸಾಹಿತ್ಯ– ಸಂಸ್ಕೃತಿ ಹಾಗೂ ಸೃಜನಶೀಲ ಕ್ಷೇತ್ರ ರಾಜಕೀಯ ಒತ್ತಡದಿಂದ ಅತೀತರಾಗಿರಬೇಕು ಎಂದು ಪ್ರತಿಪಾದಿಸುತ್ತಿದ್ದ ಅನೇಕ ಪ್ರಬೃತಿಗಳೇ ಈ ಸಭೆಯಲ್ಲಿ ಭಾಗವಹಿಸಿ ಹಾದಿಬೀದಿಯಲ್ಲಿ ಗೂಂಡಾಗಿರಿ ನಡೆಸುತ್ತಿದ್ದ ನಲಪಾಡ್‌ ಎದುರು ಕೈಕಟ್ಟಿ ನಿಂತಿದ್ದು ಅಸಹ್ಯದ ಪರಮಾವಧಿ’ ಎಂದು ಅವರು ಟೀಕಿಸಿದ್ದಾರೆ.

‘ನಾಡಿನ ಸಾಹಿತ್ಯ, ಸಂಗೀತ, ಕನ್ನಡ–ಸಂಸ್ಕೃತಿ, ಜಾನಪದ, ಯಕ್ಷಗಾನ, ಶಿಲ್ಪಕಲೆ ಸೇರಿ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಇಂಥ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲು ಎಂಬ ಸಲಹೆಯನ್ನೂ ನೀಡಿದ್ದಾರೆ. ಕರೆಸಿಕೊಂಡವರು ಮತ್ತು ಬಂದವರು ಇಬ್ಬರಿಗೂ ನಾಚಿಗೆ ಆಗಬೇಕು’ ಎಂದು ಹರಿಹಾಯ್ದಿದ್ದಾರೆ.

ADVERTISEMENT

‘ಇಂತಹದ್ದೊಂದು ಘಟನೆ ರಾಜ್ಯದ ಸಾಹಿತ್ಯಿಕ ವಲಯದಲ್ಲಿ ಹಿಂದೆಂದೂ ನಡೆದ ಉದಾಹರಣೆ ಇಲ್ಲ. ಅಧಿಕಾರಿಗಳನ್ನು ಆಳುವ ಸರ್ಕಾರದ ಆಳಾಗಿ ಮಾಡಿಕೊಂಡಿದ್ದ ರಾಜ್ಯ ಸರ್ಕಾರ, ಇದೀಗ ಸಾಹಿತಿಗಳು ಹಾಗೂ ವಿದ್ವಾಂಸರನ್ನು ತನ್ನ ಧೋರಣೆಯ ಗುಲಾಮರನ್ನಾಗಿಸಿಕೊಂಡಿದೆ. ಅಕಾಡೆಮಿಗಳ ಸಭೆಯನ್ನು ವಿಧಾನಸೌಧ ಅಥವಾ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿ ಸಂವಾದ ನಡೆಸಿದ್ದರೆ ಒಂದು ಲೆಕ್ಕ. ಆದರೆ, ಕೆಪಿಸಿಸಿ ಕಚೇರಿಯಲ್ಲಿ... ದೊಡ್ಡವರೆಲ್ಲ ಜಾಣರಲ್ಲ... ಬಿತ್ತಿದ್ದೇ ಬೆಳೆಯತ್ತಿದೆ. ಅನುಭವಿಸಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.