ADVERTISEMENT

ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್: ವೀರಪ್ಪ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 15:49 IST
Last Updated 13 ಏಪ್ರಿಲ್ 2024, 15:49 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ‘ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದು ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆದರೆ, ದೇವೇಗೌಡರು ಮೀಸಲಾತಿ ಕೊಟ್ಟಿದ್ದು ನಾನೆಂದು ಹೇಳಿಕೊಳ್ಳುತ್ತಾರೆ. ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಯಾರೂ ಏನೂ ಹೇಳಲು ಹೋಗುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಚಿನ್ನಪ್ಪ ರೆಡ್ಡಿ ಆಯೋಗ ರಚಿಸಿ ಸಣ್ಣ, ಸಣ್ಣ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಿದ್ದು ನಮ್ಮ ಸರ್ಕಾರ’ ಎಂದರು.

‘ದೇಶದಲ್ಲಿ 20 ಕೋಟಿ ಮುಸ್ಲಿಮರು, 5 ಕೋಟಿ ಕ್ರಿಶ್ಚಿಯನ್ನರಿದ್ದಾರೆ. ಭಯದ ವಾತಾವರಣದಲ್ಲಿ ಅವರು ಬದುಕುತ್ತಿದ್ದಾರೆ. ಪ್ರಜಾಪ್ರಭುತ್ವವನ್ನೇ ತಲೆಕೆಳಗು ಮಾಡಿ ದೇಶವನ್ನೇ ಹಾಳು ಮಾಡಲಾಗುತ್ತಿದೆ. ಮೋದಿ ಆಡಳಿತ ಮುಸಲೋನಿ, ಹಿಟ್ಲರ್, ಸದ್ದಾಂ ಹುಸೇನ್ ಸಮಯದ ಆಡಳಿತವನ್ನು ನೆನಪಿಸುವಂತಿದೆ’ ಎಂದು ಟೀಕಿಸಿದರು.

ADVERTISEMENT

‘ಮೋದಿ ನೀಡಿದ್ದ ಭರವಸೆಯಂತೆ, ರೈತರ ಆದಾಯ ಇಮ್ಮಡಿ ಆಗಿಲ್ಲ. ಜಿಎಸ್‌ಟಿಯಿಂದ ಸಣ್ಣ, ಸಣ್ಣ ವ್ಯಾಪಾರಿಗಳು ಸತ್ತು ಹೋಗಿದ್ದಾರೆ. ಎಂಎಸ್‌‌ಪಿ ಬಗ್ಗೆ ಬಿಜೆಪಿ ಚಕಾರ ಎತ್ತುತ್ತಿಲ್ಲ. ಸಣ್ಣ ಕೈಗಾರಿಕೆಗಳು ದಿವಾಳಿಯಾಗಿವೆ. ಅನೇಕ ಜಾಗಗಳು ರಿಯಲ್ ಎಸ್ಟೇಟ್ ಜಾಗಗಳಾಗಿ ಬದಲಾಗಿವೆ. ಜಿಡಿಪಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಈ ಎಲ್ಲ ಸಮಸ್ಯೆಗಳು ಪರಿಹಾರ ಕಾಣಬೇಕಾದರೆ ಎನ್‌ಡಿಎ ಸರ್ಕಾರ ತೊಲಗಬೇಕು’ ಎಂದರು.

‘ರಾಜ್ಯದಲ್ಲಿ ಗ್ಯಾರಂಟಿಗಳು ಜಾರಿ ಆಗುತ್ತವೆಯೇ ಎನ್ನುವ ಅನುಮಾನವಿತ್ತು. ಆದರೆ, ಕೇವಲ 10 ತಿಂಗಳಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿದೆ’ ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.