ಬೆಂಗಳೂರು: ‘ಕೆಲಸದ ಸ್ಥಳದಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆ ತಡೆಯುವ ಕಾನೂನು ತರಬೇಕಾದ ರಾಜಕಾರಣಿಯೇ ತನ್ನ ಸುತ್ತ ಇರುವ ಮಹಿಳೆಯರನ್ನು ಬಳಸಿಕೊಂಡು ಮಾಡಿರುವ ಕೃತ್ಯ ನಾಚಿಕೆಗೇಡು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕವಿತಾ ರೆಡ್ಡಿ ಮತ್ತು ಭವ್ಯ ನರಸಿಂಹಮೂರ್ತಿ ಜೊತೆ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕವಿತಾ ರೆಡ್ಡಿ ಮಾತನಾಡಿ, ‘ಮಾಜಿ ಪ್ರಧಾನಿ ಕುಟುಂಬದ ಸದಸ್ಯ ಪ್ರಜ್ವಲ್ ರೇವಣ್ಣ ಮಾಡಿರುವ ಹೀನ ಕೃತ್ಯ ಖಂಡನಿಯ’ ಎಂದರು.
‘ಸಣ್ಣ ವಿಚಾರಕ್ಕೂ ಮಾತನಾಡುವ ಪ್ರಧಾನಿ ಮೋದಿಯವರೇ ನಿಮ್ಮ ಮಿತ್ರ ಪಕ್ಷದ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಕೃತ್ಯದ ಬಗ್ಗೆ ಮಾತನಾಡಿ. ಏನೇ ಆದರೂ ಓಡಿ ಬರುವ ಶೋಭಕ್ಕಾ ಎಲ್ಲಿ ನಿಮ್ಮ ದನಿ? ಸಿ. ಟಿ. ರವಿ, ವಿಜಯೇಂದ್ರ, ಯತ್ನಾಳ, ಅಶೋಕ ಅವರೇ ಈಗ ನಿಮ್ಮ ನಾಲಿಗೆ ಹೊರಳುತ್ತಿಲ್ಲವೇ? ಇದು ರಾಜಕೀಯ ವಿಚಾರವಲ್ಲ; ದೇಶದ ಮರ್ಯಾದೆಯ ವಿಚಾರ. ನಮ್ಮ ಹೆಣ್ಣುಮಕ್ಕಳ ವಿಚಾರ. ಮಹಿಳೆಯ ಪರವಾಗಿ ದನಿ ಎತ್ತಲು ನಿಮಗೆ ಏನಾಗಿದೆ’ ಎಂದು ಪ್ರಶ್ನಿಸಿದರು.
ಭವ್ಯ ನರಸಿಂಹಮೂರ್ತಿ ಮಾತನಾಡಿ, ‘ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ಇಡೀ ದೇಶದಲ್ಲೇ ಯಾವ ಜನಪ್ರತಿನಿಧಿಯೂ ನಡೆಸದ ಕೃತ್ಯ. ಶೋಷಣೆಗೆ ಒಳಗಾಗಿರುವ ಮಹಿಳೆಯರು ದನಿ ಇಲ್ಲದ ಮಹಿಳೆಯರು. ಈ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.