ADVERTISEMENT

ಭ್ರಷ್ಟಾಚಾರಕ್ಕೆ ಅಂಕುಶ; ಲೋಕಾಯುಕ್ತ ಆದ್ಯತೆ ಆಗಲಿ: ರಮೇಶ್ ಬಾಬು ಮನವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 23:31 IST
Last Updated 23 ನವೆಂಬರ್ 2023, 23:31 IST
   

ಬೆಂಗಳೂರು: ‘ಕಾರ್ಯಾಂಗ ಮತ್ತು ಶಾಸಕಾಂಗದ ಮೇಲೆ ಬರುವ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಪ್ರಕರಣಗಳನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಲೋಕಾಯುಕ್ತರಿಗೆ ಕಾಂಗ್ರೆಸ್‌ ವಕ್ತಾರ ರಮೇಶ್ ಬಾಬು ಮನವಿ ಸಲ್ಲಿಸಿದ್ದಾರೆ.

‘ಪ್ರತಿ ಪ್ರಕರಣಕ್ಕೂ ಕಾಲಮಿತಿ ನಿಗದಿಪಡಿಸಿ ದೂರುಗಳನ್ನು ಇತ್ಯರ್ಥ ಮಾಡಬೇಕು. ಅಕ್ರಮ ಸಂಪತ್ತಿನ ಸಂಬಂಧ ಲೋಕಾಯುಕ್ತ ಪೊಲೀಸರು ಮಾಡುವ ದಾಳಿಗಳನ್ನು ಹೆಚ್ಚಿಸಿ, ಈ ಪ್ರಕರಣಗಳನ್ನು ಆರು ತಿಂಗಳ ಕಾಲಮಿತಿ ಒಳಗೆ ವಿಲೇವಾರಿ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಲೋಕಾಯುಕ್ತ ಸಂಸ್ಥೆಯ ಮೇಲೆ ಹೆಚ್ಚು ವಿಶ್ವಾಸ ಇಟ್ಟು ಭ್ರಷ್ಟಾಚಾರ ಮತ್ತು ಕರ್ತವ್ಯ‌ಲೋಪ ಪ್ರಕರಣಗಳನ್ನು ಸಾರ್ವಜನಿಕರು ದಾಖಲು ಮಾಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ದೂರುದಾರರಿಗೆ ಮಾಹಿತಿ ಇಲ್ಲದೆ ಪ್ರಕರಣಗಳನ್ನು ಕೈಬಿಡಲಾಗುತ್ತಿದೆ. ಜನ ಸಾಮಾನ್ಯರು ಲೋಕಾಯಕ್ತದ ಮೇಲೆ ವಿಶ್ವಾಸ ಕಳೆದುಕೊಂಡರೆ ಕಾರ್ಯಾಂಗದ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಭ್ರಷ್ಟಾಚಾರಕ್ಕೆ ಲೋಕಾಯುಕ್ತದಂಥ ಪ್ರಬಲ ಸಂಸ್ಥೆಗಳು ಕಡಿವಾಣ ಹಾಕದಿದ್ದರೆ, ಇದು ಮುಂದಿನ ಪೀಳಿಗೆಯನ್ನು ಹತಾಶಗೊಳಿಸುತ್ತದೆ. ಹೀಗಾಗಿ, ಭ್ರಷ್ಟಚಾರ ನಿರ್ಮೂಲನೆಯನ್ನು ಆದ್ಯತೆಯಾಗಿ ಪರಿಗಣಿಸಿ, ಈ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.