ADVERTISEMENT

ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಸಾಂಸ್ಕೃತಿಕ ಹೊನಲು: ಮೈನವಿರೇಳಿಸಿದ ಸಾಹಸ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 16:06 IST
Last Updated 15 ಆಗಸ್ಟ್ 2024, 16:06 IST
<div class="paragraphs"><p>ಫೀಲ್ಡ್ ಮಾರ್ಷಲ್ ಮಾಣೆಕ್‌ ಷಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವ ರಕ್ಷೆ ಸ್ವೀಕರಿಸಿದರು. </p></div>

ಫೀಲ್ಡ್ ಮಾರ್ಷಲ್ ಮಾಣೆಕ್‌ ಷಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವ ರಕ್ಷೆ ಸ್ವೀಕರಿಸಿದರು.

   

–ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊನಲು ಹರಿಯಿತು. ಜತೆಗೆ, ಯೋಧರು ಪ್ರದರ್ಶಿಸಿದ ಬೈಕ್‌ ಸಾಹಸವು ಸಭಿಕರನ್ನು ರೋಮಾಂಚನಗೊಳಿಸಿತು.

ADVERTISEMENT

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಕುರಿತು ನೃತ್ಯರೂಪಕವು ವೀಕ್ಷಕರ ಗಮನ ಸೆಳೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿ ಪರೇಡ್‌ ಪರಿವೀಕ್ಷಣೆ ಮಾಡಿ ಗೌರವ ರಕ್ಷೆ ಸ್ವೀಕರಿಸಿದರು. ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು. ಬಳಿಕ, ಆಕರ್ಷಕ ಪಥಸಂಚಲನ ನಡೆಯಿತು.

ಬಿಎಸ್ಎಫ್‌, ಕೆಎಸ್‌ಆರ್‌ಪಿ, ಕೆಎಸ್‌ಆರ್‌ಪಿ ಮಹಿಳಾ ವಿಭಾಗ, ಗೋವಾ ರಾಜ್ಯ ಪೊಲೀಸ್‌, ಸಿಎಆರ್‌, ಬೆಂಗಳೂರು ನಗರ ಪೊಲೀಸ್‌, ಕಾರಾಗೃಹ ಸುಧಾರಣಾ ಇಲಾಖೆ, ಎನ್‌ಸಿಸಿ, ಶ್ವಾನದಳ, ರಾಜ್ಯ ಅಬಕಾರಿ ದಳ, ಸಂಚಾರ ವಾರ್ಡನ್‌, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ರಾಷ್ಟ್ರೀಯ ಮಿಲಿಟರಿ ಶಾಲೆ, ನಂದಿನಿ ಲೇಔಟ್‌ನ ಪ್ರೆಸಿಡೆನ್ಸಿ ಸ್ಕೂಲ್‌, ಪೊಲೀಸ್‌ ಪಬ್ಲಿಕ್‌ ಶಾಲೆ ಸೇರಿದಂತೆ 40 ತಂಡಗಳು ಪರೇಡ್‌ನಲ್ಲಿ ಪಾಲ್ಗೊಂಡಿದ್ದವು. ಪಥಸಂಚಲನ ಆಕರ್ಷಕವಾಗಿ ನಡೆಯಿತು.

ಸಾಂಸ್ಕೃತಿಕ ವೈಭವ: ಮೈದಾನದಲ್ಲಿ ಸಾಂಸ್ಕೃತಿಕ ವೈಭವ ಮನೆ ಮಾಡಿತ್ತು. ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಯಭಾರತಿ ನೃತ್ಯರೂಪಕ ಪ್ರಸ್ತುತ ಪಡಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತ ಮಾಹಿತಿಯುಳ್ಳ ದೃಶ್ಯರೂಪಕ ಪ್ರಸ್ತುತಪಡಿಸಿತು.

ಪಿಳ್ಳಣ್ಣ ಗಾರ್ಡನ್‌ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡವು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ ಕುರಿತು ನೃತ್ಯವನ್ನು ಪ್ರದರ್ಶಿಸಿತು. ಈ ನೃತ್ಯರೂಪಕವು ರಾಣಿ ಅಬ್ಬಕ್ಕನ ಸಾಹಸಮಯ ಜೀವನ ಕುರಿತು ಪ್ರೇಕ್ಷಕರಿಗೆ ತಿಳಿಸಿಕೊಟ್ಟಿತು. ಪರಕೀಯರ ದಾಳಿಯನ್ನು ಧೈರ್ಯದಿಂದ ಹೇಗೆ ಎದುರಿಸಿದರು ಎಂಬುದನ್ನೂ ಪ್ರಸ್ತುತ ಪಡಿಸಲಾಯಿತು.

ಸಾಹಸ ಪ್ರದರ್ಶನ:
ವಿವೇಕ್‌ ಪವಾರ್‌ ನೇತೃತ್ವದಲ್ಲಿ ಮರಾಠ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟ್‌ ಸೆಂಟರ್‌ನ ತಂಡ ‘ಮಲ್ಲಕಂಬ’ ಪ್ರದರ್ಶನ ನೀಡಿದರು. ಪ್ರತಿ ಸಾಹಸ ಪ್ರದರ್ಶನದ ವೇಳೆಯೂ ಚಪ್ಪಾಳೆಯ ಸುರಿಮಳೆ ಆಯಿತು.

ಪ್ಯಾರಚ್ಯೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌ನ ಸೋಂಬೀರ್‌ ಮತ್ತು ಅವರ ತಂಡ ‘ಪ್ಯಾರಾ ಮೋಟಾರ್’ ಪ್ರದರ್ಶನ ನೀಡಿತು.

ಕೊರ್‌ ಆಫ್‌ ಮಿಲಿಟರಿ ಪೊಲೀಸ್‌ ಸೆಂಟರ್‌ ಆ್ಯಂಡ್‌ ಸ್ಕೂಲ್‌ನ ಎಂ.ಕೆ. ಸಿಂಗ್‌ ಅವರ ತಂಡ ‘ಮೋಟಾರ್‌ ಸೈಕಲ್‌’ ಪ್ರದರ್ಶನವು ಮೈನವಿರೇಳಿಸಿದ್ದಷ್ಟೇ ಅಲ್ಲ, ಜನರಲ್ಲಿ ಸಂಚಲನ ಸೃಷ್ಟಿತು. ಇಟ್ಟಿಗೆ ಪುಡಿ ಮಾಡುವ ವೇಳೆ ಬೈಕ್‌ ಸವಾರ ನಿಯಂತ್ರಣ ತಪ್ಪಿ ಬಿದ್ದರು. ಯಾವುದೇ ಅಪಾಯ ಸಂಭವಿಸಲಿಲ್ಲ.

ಕಿಕ್ಕಿರಿದ್ದು ಸೇರಿದ್ದ ಪ್ರೇಕ್ಷಕರು: ಈ ಬಾರಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಅಂಗಾಂಗ ದಾನ ಮಾಡಿದ 65 ಜನರ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಯವರು ಗೌರವಿಸಿ ಪ್ರಶಂಸನಾ ಪತ್ರ ವಿತರಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ, ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹಾಜರಿದ್ದರು.

ಬಿಎಸ್ಎಫ್ ಯೋಧರ ಆಕರ್ಷಕ ಪಥ ಸಂಚಲನ –

ಪಥಸಂಚಲನದಲ್ಲಿ ಶ್ವಾನದಳ

ಪಥ ಸಂಚಲನದಲ್ಲಿ ಸಾಗಿ ಬಂದ ವಿದ್ಯಾರ್ಥಿನಿ

ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು
‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ
ಯೋಧರಿಂದ ಆಕರ್ಷಕ
ಗಮನ ಸೆಳೆದ ಬೈಕ್‌ ಸಾಹಸ ಪ್ರದರ್ಶನ
ಯೋಧರು ಬೈಕ್‌ನಲ್ಲಿ ಸಾಹಸ ತೋರಿದರು
ಯೋಧರಿಂದ
ಮೋಟಾರ್ ಸೈಕಲ್‌ ಪ್ರದರ್ಶನದ ವೇಳೆ ಆಯ ತಪ್ಪಿಬಿದ್ದ ದೃಶ್ಯ

ಮೂಲಸೌಕರ್ಯಕ್ಕೆ ₹48686 ಕೋಟಿ

ವಿಶ್ವದರ್ಜೆ ನಗರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ₹48686 ಕೋಟಿ ವೆಚ್ಚದಲ್ಲಿ ದೀರ್ಘಾವಧಿಯ ಮೂಲಸೌಕರ್ಯ ಯೋಜನೆ ಜಾರಿಗೆ ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂಚಾರ ದಟ್ಟಣೆ ನಿವಾರಣೆಗೆ ಪೆರಿಫೆರಲ್ ವರ್ತುಲ ರಸ್ತೆ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.