ಬೆಳಗಾವಿ: ‘ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎನ್ನುವ ಮೂಲಕ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮಹಿಳಾ ಕುಲಕ್ಕೆ ಕಪ್ಪುಚುಕ್ಕೆ ಇಟ್ಟಿದ್ದಾರೆ. ವನಿತೆಯರು ತಕ್ಷಣವೇ ಅವರ ವಿರುದ್ಧ ದೊಡ್ಡ ಹೋರಾಟ ಆರಂಭಿಸಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘1.20 ಕೋಟಿ ಹೆಣ್ಣುಮಕ್ಕಳು ಗೃಹಲಕ್ಷ್ಮಿ ಮತ್ತು 1.50 ಲಕ್ಷ ಕುಟುಂಬದವರು ಗೃಹಜ್ಯೋತಿ ಬಳಸುತ್ತಾರೆ. ಈ ಎಲ್ಲ ಕುಟುಂಬಗಳ ಹೆಣ್ಣುಮಕ್ಕಳಿಗೂ ಕುಮಾರಸ್ವಾಮಿ ಅವಮಾನಿಸಿದ್ದಾರೆ. ಈಗ ಕ್ಷಮಾಪಣೆ ಕೇಳುವೆ, ವಿಷಾದಿಸುವೆ ಎನ್ನುತ್ತಾನೆ ಆ ಮನುಷ್ಯ. ಆ ಪುಣ್ಯಾತ್ಮನ ಯಾವ ಮಾತನ್ನೂ ನಾನು ಕೇಳಲು ಸಿದ್ಧನಿಲ್ಲ. ಮಹಿಳೆಯರೂ ಕ್ಷಮಿಸುವುದಿಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಣಾಳಿಕೆಗೆ ಬಿಟ್ಟು ಅಭಿವೃದ್ಧಿ ಹೇಳಿ:
‘ಬಿಜೆಪಿಯವರಿಗೆ ಪ್ರಣಾಳಿಕೆ ಬಿಡುಗಡೆ ಮಾಡುವ ನೈತಿಕತೆಯೇ ಇಲ್ಲ. 10 ವರ್ಷ ಆಡಳಿತದಲ್ಲಿ ಏನೂ ಮಾಡಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ, ₹15 ಲಕ್ಷ ಬಡವರಿಗೆ ಬರಲಿಲ್ಲ, ರೈತರ ಆದಾಯ ದ್ವಿಗುಣ ಮಾಡಲಿಲ್ಲ, ಕಪ್ಪು ಹಣವನ್ನೂ ಮರಳಿ ತರಲಿಲ್ಲ. ಹೀಗೆಲ್ಲ ಇರುವಾಗ ಯಾವ ಮುಖ ಇಟ್ಟುಕೊಂಡು ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತೀರಿ? ಇದಕ್ಕೆ ಜನ ಬೆಲೆ ಕೊಡುವುದಿಲ್ಲ’ ಎಂದರು.
‘ರಾಜ್ಯದಲ್ಲಿ ಮೋದಿ ಗಾಳಿ ಇಲ್ಲ. ಇದ್ದಿದ್ದರೆ 14 ಹೊಸ ಮುಖಗಳಿಗೆ ಏಕೆ ಟಿಕೆಟ್ ನೀಡಿದರು? ಹಾಲಿ ಸಂಸದರು, ಪಕ್ಷದ ದೊಡ್ಡ ನಾಯಕರೆಲ್ಲ ಎಲ್ಲಿ ಹೋದರು? ಯಾವ ಗಾಳಿಗೆ ಹಾರಿ ಹೋದರು’ ಎಂದೂ ಶಿವಕುಮಾರ್ ಪ್ರಶ್ನಿಸಿದರು.
‘ಸದ್ಯದ ಬಿಜೆಪಿ ವರದಿಗಳೆಲ್ಲ ಸುಳ್ಳು ಇವೆ. ಕೇಂದ್ರದಲ್ಲಿ ಅವರು ಸೋತು ಮನೆಗೆ ಹೋಗುತ್ತಾರೆ. ಸರ್ಕಾರ ನಾವೇ ರಚಿಸುತ್ತೇವೆ’ ಎಂದರು.
‘ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಿಸಲ್ಲ. ದಿಂಗಾಲೇಶ್ವರ ಸ್ವಾಮೀಜಿ ಧರ್ಮ ಪ್ರಚಾರಕರು. ಅವರು ಏನು ಮಾಡುವುದಕ್ಕೂ ಸ್ವತಂತ್ರ ಇದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.