ಬೆಂಗಳೂರು: ಎರಡೂವರೆ ವರ್ಷ ರಾಜಕೀಯ ಮಾಡಿದವರಿಗೆ ಬದ್ಧತೆ ಇಲ್ಲ. ಸದಾ ಅಧಿಕಾರ ಸಿಗುವ ಜಾಗಕ್ಕೆ ಹಾರುತ್ತಾರೆ ಎಂದು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, 136 ಶಾಸಕರಿರುವ ಕಾಂಗ್ರೆಸ್ಗೆ ಚನ್ನಪಟ್ಟಣದಲ್ಲಿ ಕಣಕ್ಕಿಳಿಸಲು ಅಭ್ಯರ್ಥಿಯೇ ಇಲ್ಲ. ಬಿಜೆಪಿ ತೊರೆಯಲು ಯೋಗೇಶ್ವರ್ ಅವರಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದರು.
ಬಿಜೆಪಿ–ಜೆಡಿಎಸ್ನ ಯಾವ ನಾಯಕರಿಂದಲೂ ಯೋಗೇಶ್ವರ್ ಅವರು ಪಕ್ಷ ತೊರೆಯುವಂತಹ ತಪ್ಪು ನಡೆದಿಲ್ಲ. ಜೆಡಿಎಸ್ ಟಿಕೆಟ್ ಕೊಡುವ ಭರವಸೆ ನೀಡಿದರೂ ಆವರಿಗೆ ಬೇಕಿರಲಿಲ್ಲ. ಎರಡೂ ತಿಂಗಳಿನಿಂದಲೂ ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯೇ ಟಾರ್ಗೆಟ್. ಲೋಕಸಭಾ ಚುನಾವಣೆಯ ಫಲಿತಾಂಶ ಅವರ ನಿದ್ದೆಗೆಡಿಸಿದೆ. ಅದಕ್ಕಾಗಿ ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.