ADVERTISEMENT

ಶಿಸ್ತು ಮಕ್ಕಳ ಜೀವಕ್ಕೆ ಎರವಾಗದಿರಲಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 21:05 IST
Last Updated 6 ಜುಲೈ 2024, 21:05 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಶಿಸ್ತು ಹೇರುವ ಭರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಅಮಾಯಕ ಜೀವಗಳಿಗೆ ಹಾನಿಯಾಗುವಂತೆ ನಡೆದುಕೊಳ್ಳಬಾರದು’ ಎಂಬ ಕಳಕಳಿ ವ್ಯಕ್ತಪಡಿಸಿರುವ ಹೈಕೋರ್ಟ್, ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕಿ ಆಕೆಯ ಆತ್ಮಹತ್ಯೆಗೆ ಕಾರಣವಾದ ಆರೋಪ ಹೊತ್ತ ಇಬ್ಬರು ಶಿಕ್ಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

‘ನಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಧರ್ಮಸ್ಥಳದ ಎಸ್.ಡಿ.ಎಂ ಪ್ರೌಢಶಾಲೆ ಶಿಕ್ಷಕರಾದ ರೂಪೇಶ್ (34) ಮತ್ತು ಸದಾನಂದ (44) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

ADVERTISEMENT

‘ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಘಟನೆಯ ಕುರಿತು ವಿಸ್ತೃತ ವಿಚಾರಣೆ ನಡೆಯಬೇಕಾದ ಅಗತ್ಯವಿದೆ’ ಎಂದು ಹೇಳಿದೆ.

‘ಶಿಕ್ಷಕರು ಹದಿವಯಸ್ಸಿನ ಮಕ್ಕಳಿಗೆ ಬೋಧಿಸುವಾಗ ಅವರ ಮಾನಸಿಕ ತುಮುಲಗಳನ್ನು ಅರಿತಿರಬೇಕು. ಅವರ ಮುಗ್ಧ ಮತ್ತು ಅರಳುವ ತಾರುಣ್ಯದ ಕನಸುಗಳಿಗೆ ಸರಿದಾರಿ ತೋರಿಸಬೇಕು. ಎಳೆಮಕ್ಕಳ ನಡವಳಿಕೆಗಳನ್ನು ವಿಶಾಲ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು’ ಎಂದಿದೆ.

‘ಶಿಕ್ಷಕ ಸದಾನಂದ ಅವರು, ನೀನು (ಮೃತ ವಿದ್ಯಾರ್ಥಿನಿ) ಯುವಕನನ್ನು ಚುಂಬಿಸುತ್ತಿರುವ ವಿಡಿಯೊ ನನ್ನ ಬಳಿ ಇದೆ. ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಸಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ಮೃತ ವಿದ್ಯಾರ್ಥಿನಿ ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದಾಗ, ಮಕ್ಕಳ ವಿಚಾರದಲ್ಲಿ ಶಿಕ್ಷಕರು ಹೊಂದಿರುವ ಸಂಕುಚಿತ ದೃಷ್ಟಿಕೋನದ ಬಗ್ಗೆ ಆತಂಕ ಮೂಡುತ್ತದೆ’ ಎಂದು ಪೀಠ ಹೇಳಿದೆ.

‘ವಿದ್ಯಾರ್ಥಿನಿ ಯುವಕನನ್ನು ಮಾತನಾಡಿಸುವುದನ್ನೇ ಅಶಿಸ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠ ವಿವರಿಸಿದೆ.

‘ಮೃತ ವಿದ್ಯಾರ್ಥಿನಿ 14 ವರ್ಷದ ಬಾಲಕಿ. ಅದು ಬಾಲಕಿಯೊಬ್ಬಳ, ದೈಹಿಕ ಮತ್ತು ಮಾನಸಿಕ ಬದಲಾವಣೆಯ ಹಂತ. ಇಂತಹ ಮಕ್ಕಳ ಜೊತೆ ಶಿಕ್ಷಕರು ಎನ್ನಿಸಿಕೊಂಡವರು ಮುದದಿಂದ, ಸಹಾನುಭೂತಿಯಿಂದ ನಿಷ್ಕಲ್ಮಷ ಪ್ರೀತಿಯಿಂದ ವ್ಯವಹರಿಸಬೇಕು. ಇಂದು ಕಾಲ ಬದಲಾಗಿದೆ. ಅದಕ್ಕೆ ಅನುಗುಣವಾಗಿ ನಾವೂ ಬದಲಾಗಬೇಕು ಎಂಬ ಸೂಕ್ಷ್ಮತೆಯನ್ನು ಶಿಕ್ಷಕರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು‘ ಎಂದು ನ್ಯಾಯಪೀಠ ಎಚ್ಚರಿಸಿದೆ.

ಪ್ರಕರಣವೇನು?: ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಎಸ್ ಡಿ ಎಂ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೃತ ಬಾಲಕಿ, ಅದೇ ಶಾಲೆಯಲ್ಲಿನ ಯುವಕನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರು. ಇದನ್ನು ಶಿಕ್ಷಕರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯ ತಾಯಿಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯ ತಾಯಿ, ನನ್ನ ಮಗಳ ಬಗ್ಗೆ ಏನೇ ಆರೋಪ ಇದ್ದರೂ, ಅದನ್ನು ಇತರೆ ಮಕ್ಕಳ ಮುಂದೆ ಬಹಿರಂಗಪಡಿಸಿ ಅವಮಾನಿಸದೆ ನನ್ನ ಗಮನಕ್ಕೆ ತನ್ನಿ‌. ಯಾವುದೇ ಕಾರಣಕ್ಕೂ ಮಗಳ ಘನತೆಗೆ ಮಸಿ ಬಳಿಯಬೇಡಿ ಎಂದು ಮನವಿ ಮಾಡಿದ್ದರು.

ಏತನ್ಮಧ್ಯೆ ವಿದ್ಯಾರ್ಥಿನಿ ಮಾತನಾಡುವ ವಿಚಾರವನ್ನು ರೂಪೇಶ್ ಇತರೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಇದರಿಂದ ಬಾಲಕಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಶಿಕ್ಷಕ ರೂಪೇಶ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸದಾನಂದ ವಿರುದ್ಧ ವಿದ್ಯಾರ್ಥಿನಿ ತಾಯಿ ದೂರು ನೀಡಿದ್ದರು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಧರ್ಮಸ್ಥಳ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿಯ ವಿವಿದ ಸೆಕ್ಷನ್, ಪೋಕ್ಸೊ ಮತ್ತು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.