ಬೆಂಗಳೂರು: ತೆರಿಗೆ ಪಾಲು ಹಂಚಿಕೆ ಹಾಗೂ ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕರುನಾಡಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಿಎಂ, 2017ರಲ್ಲಿ ಕರ್ನಾಟಕಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬರಪರಿಹಾರವಾಗಿ ಸಿಕ್ಕಿರುವುದು ಬಿಡಿಗಾಸು ಮಾತ್ರ. ಅಲ್ಲದೆ, ಕಳೆದ 4 ತಿಂಗಳಿನಿಂದ ಬರ ಪರಿಹಾರಕ್ಕಾಗಿ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಕರುನಾಡಿಗೆ ಏಕೆ ಈ ಅನ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
2019ರ ಭೀಕರ ನೆರೆಯಲ್ಲಿ ಕರ್ನಾಟಕದ ಭಾಗಶಃ ಭಾಗ ಮುಳಗಿತ್ತು. ಆ ಸಂದರ್ಭದಲ್ಲಿ ₹35 ಸಾವಿರ ಕೋಟಿ ಪರಿಹಾರ ನೀಡುವಂತೆ ರಾಜ್ಯವು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರ ರಾಜ್ಯಕ್ಕೆ ಕೊಟ್ಟಿದ್ದು ₹1,869 ಕೋಟಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಭೀಕರ ಬರದಿಂದ ಕರ್ನಾಟಕ ತತ್ತರಿಸಿದೆ. ರಾಜ್ಯದ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಒಟ್ಟು ₹33,770 ಕೋಟಿ ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರಕ್ಕೆ ₹17,901 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ನಾಲ್ಕು ತಿಂಗಳುಗಳು ಕಳೆದರೂ ಈವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ನಮ್ಮವರು ಶ್ರಮದಿಂದ ಕಟ್ಟಿದ ತೆರಿಗೆ ಹಣ ನಮ್ಮವರ ಕಷ್ಟಕಾಲಕ್ಕೆ ಬಾರದಿದ್ದರೆ ಏನು ಪ್ರಯೋಜನ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.