ಬೆಂಗಳೂರು: ರಾಜ್ಯದ ಹಲವೆಡೆ ಮಳೆ, ಪ್ರವಾಹದಿಂದ ಮನೆ, ಜನ ಜಾನುವಾರುಗಳು ನೀರಿನಲ್ಲಿ ಮುಳುಗುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಹಗರಣಗಳಲ್ಲಿ ಮುಳುಗಿದೆ ಎಂದು ಜೆಡಿಎಸ್ ರಾಜ್ಯ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ‘ಕರಾವಳಿ, ಮಲೆನಾಡು, ಬಯಲುಸೀಮೆಯ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಗುಡ್ಡಗಳ ಕುಸಿತ, ಸೇತುವೆಗಳ ಮುಳುಗಡೆ, ಮನೆಗಳ ಕುಸಿತದಿಂದ ಜೀವ ಹಾನಿಯಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಊಟ, ವಸತಿಯಿಲ್ಲದೇ ನರಕ ಅನುಭವಿಸುತ್ತಿದ್ದಾರೆ. ಆದರೆ, ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ, ಸಾಂತ್ವನ, ಪರಿಹಾರ ಒದಗಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರುಗಳು ಕಾಣೆಯಾಗಿದ್ದಾರೆ‘ ಎಂದು ಲೇವಡಿ ಮಾಡಿದೆ.
‘ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಗಳು ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುವಲ್ಲೇ ಬ್ಯುಸಿಯಾಗಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಡು ನೀರಿನಲ್ಲೇ 'ಕೈ'ಬಿಟ್ಟಿರುವ ಸರ್ಕಾರಕ್ಕೆ ನೊಂದವರ, ನಿರಾಶ್ರಿತರ ಕಣ್ಣೀರು ಶಾಪವಾಗದೆ ಬಿಡದು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.