ಬೆಂಗಳೂರು: ‘ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಹೈಕಮಾಂಡ್ ಆಗಿಂದಾಗ್ಗೆ ವರದಿ ತರಿಸಿಕೊಳ್ಳುತ್ತದೆ. ಸುಮ್ಮನೆ ಕೂರುವುದಿಲ್ಲ. ನಾವು ವರದಿ ಕಳುಹಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸಚಿವ ಸತೀಶ ಜಾರಕಿಹೊಳಿಯವರಿಂದ ಖರ್ಗೆ ಭೇಟಿ, ಮುಖ್ಯಮಂತ್ರಿ ಬದಲಾವಣೆ ವದಂತಿ ಕುರಿತ ಪ್ರಶ್ನೆಗೆ ಅವರು, ‘ನಮ್ಮ (ಕಾಂಗ್ರೆಸ್) ನಾಯಕರು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನಲ್ಲದೆ ಇನ್ಯಾರನ್ನು ಭೇಟಿ ಮಾಡಬೇಕು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ’ ಎಂದು ಪುನರುಚ್ಚರಿಸಿದರು.
‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯಕ್ಕೆ ಬರುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ದೆಹಲಿಗೆ ಹೋಗುವ ಉದ್ದೇಶವೂ ಇಲ್ಲ’ ಎಂದರು.
‘ಗುಪ್ತ ಸಭೆ ಮಾಡಿ, ದೆಹಲಿಗೆ ಭೇಟಿ ನೀಡುವುದು ಯಾವ ಸಂದೇಶ ರವಾನಿಸುತ್ತದೆ’ ಎಂದು ಕೇಳಿದಾಗ, ‘ಹೈಕಮಾಂಡ್ ನಾಯಕರನ್ನು ಸಚಿವರು, ಶಾಸಕರು ಭೇಟಿ ಮಾಡುವುದು ಸ್ವಾಭಾವಿಕ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.