ADVERTISEMENT

Muda Scam: ಸಿದ್ದರಾಮಯ್ಯಗೆ ಇ.ಡಿ. ಬಲೆ

ಮುಡಾ ಹಗರಣ: ಮುಖ್ಯಮಂತ್ರಿ ವಿರುದ್ಧ ಇಸಿಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:31 IST
Last Updated 30 ಸೆಪ್ಟೆಂಬರ್ 2024, 23:31 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.

‘ಸಿದ್ದರಾಮಯ್ಯ ಕುಟುಂಬವು ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು.

ADVERTISEMENT

ಲೋಕಾಯುಕ್ತದ ಮೈಸೂರು ಜಿಲ್ಲಾ ಘಟಕದ ಪೊಲೀಸರು ನ್ಯಾಯಾಲಯದ ಆದೇಶದಂತೆ ಶನಿವಾರ ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ಆಧಾರವಾಗಿ ಟ್ಟುಕೊಂಡು ಇ.ಡಿ ಬೆಂಗಳೂರು
ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ‘ (ಇಸಿಐಆರ್‌) ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್‌ ಠಾಣೆಗಳು ಮತ್ತು ಪೊಲೀಸ್‌ ಇಲಾಖೆಯ ವ್ಯಾಪ್ತಿಯಲ್ಲಿರುವ ತನಿಖಾ ಸಂಸ್ಥೆಗಳು ಅಪರಾಧ ಪ್ರಕರಣಗಳ ತನಿಖೆಗೂ ಮುನ್ನ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಅದೇ ಮಾದರಿಯಲ್ಲಿ ಇ.ಡಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುವಾಗ ಇಸಿಐಆರ್‌ ದಾಖಲಿಸಿ, ಮುಂದುವರಿಯುತ್ತದೆ.

ಮುಂದೇನಾಗಬಹುದು?

  •  ಸಿದ್ದರಾಮಯ್ಯ ಹಾಗೂ ಇತರ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ಶೋಧ ಕಾರ್ಯಾಚರಣೆ ನಡೆಸಬಹುದು.

  • ತನಿಖೆಗೆ ಹಾಜರಾಗುವಂತೆ ಸಿದ್ದರಾಮಯ್ಯ ಹಾಗೂ ಇತರ ಆರೋಪಿಗಳಿಗೆ ಇ.ಡಿ. ನೋಟಿಸ್‌ ಜಾರಿಗೊಳಿಸಬಹುದು.

  • ವಿಚಾರಣೆಗೆ ಹಾಜರಾಗಲು ಆರೋಪಿಗಳು ಕಾಲಾವಕಾಶ ನೀಡುವಂತೆ ಇ.ಡಿ.ಗೆ ಮನವಿ ಸಲ್ಲಿಸಬಹುದು.

  •  ಪ್ರಕರಣ ಪ್ರಶ್ನಿಸಿ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಬಹುದು.

  •  ಪ್ರಬಲ ಪುರಾವೆ ಸಿಕ್ಕರೆ ಮುಖ್ಯಮಂತ್ರಿ ಬಂಧನವೂ ಆಗಬಹುದು

‘ಘೋರ ತಿರಸ್ಕಾರಕ್ಕೆ ಮೋದಿ ಪ್ರತೀಕಾರ’
ಕರ್ನಾಟಕದ ಜನರು ಅವರನ್ನು (ಪ್ರಧಾನಿ ನರೇಂದ್ರ ಮೋದಿ) 2023ರ ಮಾರ್ಚ್‌ನಲ್ಲಿ ಘೋರವಾಗಿ ತಿರಸ್ಕರಿಸಿದರು. ಅವರು ಆ ಅವಮಾನವನ್ನು ಮರೆತಿಲ್ಲ. ತನಿಖಾ ಸಂಸ್ಥೆಯು ರಾಜಕೀಯ ವಿರೋಧಿಗಳ ವಿರುದ್ಧ ಕಿರುಕುಳ, ಸೇಡು ತೀರಿಸಿಕೊಳ್ಳುವ ಸಂಸ್ಥೆಯಾಗಿ ಬದಲಾಗಿರುವುದು ರಹಸ್ಯವಲ್ಲ. ಪ್ರಧಾನಿ ಹಾಗೂ ಇ.ಡಿ. ಬಣ್ಣ ಶೀಘ್ರದಲ್ಲಿ ಬಯಲಾಗಲಿದೆ. ನಾವು ಭಯ ಪಡಬೇಕಿಲ್ಲ. ಈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ದೋಷ‌ಮುಕ್ತರಾಗಿ ಹೊರಬರಲಿದ್ದಾರೆ. - ಜೈರಾಮ್ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)
ಸಚಿವರು, ಆಪ್ತರ ಜತೆ ಸಿ.ಎಂ ಚರ್ಚೆ
ಬೆಂಗಳೂರು: ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಮುಂದಿನ ನಡೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಚಿವರು ಹಾಗೂ ತಮ್ಮ ಆಪ್ತರ ಜತೆ ಸಮಾಲೋಚನೆ ನಡೆಸಿದರು. ಸಚಿವರಾದ ಜಿ.ಪರಮೇಶ್ವರ, ಎಚ್‌.ಕೆ. ಪಾಟೀಲ, ಎಚ್‌.ಸಿ. ಮಹದೇವಪ್ಪ ಹಾಗೂ ಕಾನೂನು ತಜ್ಞರ ಜತೆಯೂ ಮಾತುಕತೆ ನಡೆಸಿದರು. ಇ.ಡಿ. ಪ್ರಕರಣವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬ ಸಲಹೆಗಳನ್ನು ಪಡೆದರು ಎಂದು ಮೂಲಗಳು ಹೇಳಿವೆ.
ಕೇಜ್ರಿವಾಲ್, ಸೊರೇನ್ ಸಾಲಿಗೆ ಸಿದ್ದರಾಮಯ್ಯ
ಅಧಿಕಾರದಲ್ಲಿದ್ದಾಗ ಜಾರಿ ನಿರ್ದೇಶನಾಲಯ ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸಿದ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್‌, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಲಿಗೆ ಸಿದ್ದರಾಮಯ್ಯ ಸೇರಿದ್ದಾರೆ. ‌ಭೂಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜನವರಿಯಲ್ಲಿ ಹಾಗೂ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಆರು ತಿಂಗಳ ಬಳಿಕ ಉಭಯ ನಾಯಕರಿಗೆ ಜಾಮೀನು ಸಿಕ್ಕಿತ್ತು. ‘ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಪ್ರತಿಪಕ್ಷಗಳು ಪದೇ ಪದೇ ಆರೋಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.