ADVERTISEMENT

ಆನೆ ಅರ್ಜುನನ ಸಾವು: ನ್ಯಾಯಾಂಗ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 14:47 IST
Last Updated 28 ಡಿಸೆಂಬರ್ 2023, 14:47 IST
<div class="paragraphs"><p>ಆನೆ ಅರ್ಜುನ</p></div>

ಆನೆ ಅರ್ಜುನ

   

ಬೆಂಗಳೂರು: ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ ಹಾಗೂ ಒಂಟಿ ಕೊಂಬಿನ ಕಾಡಾನೆಗಳ ಸಾವಿನ ಕುರಿತು ಹೈಕೋರ್ಟ್‌ ನ್ಯಾಯಮೂರ್ತಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳ ಸಾವಿನ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸದೆ ಇದ್ದರೆ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸುವ ಮೂಲಕ ಸಂಸ್ಥೆಯೇ ಜೀವಲೋಕ ಸಂರಕ್ಷಣೆಗೆ ಮುಂದಾಗಲಿದೆ ಎಂದು ಹೇಳಿದರು.

ADVERTISEMENT

ಎರಡೂ ಆನೆಗಳ ಸಾವು ಅರಣ್ಯ ಇಲಾಖೆಯ ಅಧಿಕಾರಿಗಳ ಅಜ್ಞಾನ ಮತ್ತು ಅದಕ್ಷತೆಯಿಂದ ಸಂಭವಿಸಿವೆ. ಘಟನೆಯ ವಿವರಗಳನ್ನು ಇದುವರೆಗೂ ಅರಣ್ಯ ಇಲಾಖೆ ಹಂಚಿಕೊಂಡಿಲ್ಲ. 2016ರಲ್ಲಿ ಮಂಚನಬೆಲೆ ಹಿನ್ನೀರಿನಲ್ಲಿ ನರಳಿ ಮೃತಪಟ್ಟ ಸಿದ್ಧ ಎಂಬ ಕಾಡಾನೆಯ ನೆನಪು ಮರೆಯಲು ಸಾಧ್ಯವಿಲ್ಲ. ಇದಕ್ಕೆಲ್ಲ ಭ್ರಷ್ಟ ವ್ಯವಸ್ಥೆಯೇ ಕಾರಣ ಎಂದು ದೂರಿದರು.

ಡಿ.30ರಂದು ಕೈಗೆ ಹಸಿರು ಇಲ್ಲವೇ ಬಿಳಿ ಬಟ್ಟೆ ಕಟ್ಟಿಕೊಂಡು ಆನೆಗಳ ಸಾವಿನ ನೋವು ಹೊರ ಹಾಕಲಾಗುವುದು, ಮನೆಗಳ ಮುಂದೆ ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಅರ್ಜುನನಿಗಾಗಿ ಕಂಬನಿ ಮಿಡಿಯಲಾಗುವುದು ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಂ.ಕೆ.ರಮೇಶ್‌, ಕೈಗಾರಿಕೋದ್ಯಮಿ ಗೌಡಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.