ಬೆಂಗಳೂರು: ನಗರದ ಕೆ.ಆರ್.ಪುರ ಹೋಬಳಿಯ ಕೊತ್ತನೂರಿನಲ್ಲಿ ಅರಣ್ಯ ಇಲಾಖೆಗೆ ಸೇರಿದ, ಸುಮಾರು ₹700 ಕೋಟಿ ಮೌಲ್ಯದ 22 ಎಕರೆ 8 ಗುಂಟೆ ಜಮೀನಿನ ಒತ್ತುವರಿಯನ್ನು ತೆರವು ಮಾಡಿ, ವಶಕ್ಕೆ ಪಡೆದುಕೊಳ್ಳಲು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ನೆಡುತೋಪು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮದ ಸರ್ವೆ ನಂ:48ರ 22 ಎಕರೆ 8 ಗುಂಟೆ ಜಾಗವನ್ನು 1999–2000ರಲ್ಲಿ ಅರಣ್ಯ ಇಲಾಖೆಗೆ ವಹಿಸಲಾಗಿತ್ತು. ಆದರೆ ಆ ಜಮೀನಿನಲ್ಲಿ ಅರಣ್ಯ ಇಲಾಖೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ನೆಡುತೋಪನ್ನೂ ಅಭಿವೃದ್ಧಿಪಡಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇಲಾಖೆಗೆ ಸೇರಿದ ಜಮೀನನ್ನು ಕಾಪಾಡುವಲ್ಲಿ ಮತ್ತು ಅಲ್ಲಿ ನೆಡುತೋಪು ಅಭಿವೃದ್ಧಿಪಡಿಸುವಲ್ಲಿ ಇಲಾಖೆಯ ಹಿಂದಿನ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಜಮೀನಿನ ಒತ್ತುವರಿ ತೆರವಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯ 64(ಎ) ಸೆಕ್ಷನ್ ಅಡಿ ಕೂಡಲೇ ಪ್ರಕ್ರಿಯೆ ಆರಂಭಿಸಿ’ ಎಂದು ಸೂಚಿಸಿದ್ದಾರೆ.
‘2000ರಲ್ಲಿ ಈ ಜಮೀನಿಗೆ ಸಂಬಂಧಿಸಿದಂತೆ ಪಹಣಿ ಮಾಡಿದ್ದು, ಅದರಲ್ಲಿ 13 ಎಕರೆಯನ್ನಷ್ಟೇ ತೋರಿಸಲಾಗಿದೆ. ಜಮೀನಿನ ನಕ್ಷೆ ತರಿಸಿಕೊಂಡು, ಉಳಿದ 9 ಎಕರೆ 8 ಗುಂಟೆಯನ್ನು ಗುರುತಿಸಿ ಮತ್ತು ದಾಖಲೆಗಳನ್ನು ಪಡೆದುಕೊಳ್ಳಿ. ಈ ಜಮೀನಿನ ಮರುವಶಕ್ಕೆ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎರಡು ದಿನಗಳ ಒಳಗೆ ವರದಿ ನೀಡಿ’ ಎಂದು ಸಚಿವ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.