ADVERTISEMENT

ಅಕೇಶಿಯಾ ಬೆಳೆಯಲು ಎಂಪಿಎಂಗೆ ಕಾಡು: ಕೇಂದ್ರಕ್ಕೆ ಸಚಿವ ಈಶ್ವರ ಖಂಡ್ರೆ ಒತ್ತಡ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 16:02 IST
Last Updated 25 ಜೂನ್ 2024, 16:02 IST
<div class="paragraphs"><p>ಭೂಪೇಂದರ್ ಯಾದವ್‌ ಜತೆಯಲ್ಲಿ ಸಂಸದ ಸಾಗರ್ ಖಂಡ್ರೆ ಹಾಗೂ ಸಚಿವ ಈಶ್ವರ ಖಂಡ್ರೆ</p></div>

ಭೂಪೇಂದರ್ ಯಾದವ್‌ ಜತೆಯಲ್ಲಿ ಸಂಸದ ಸಾಗರ್ ಖಂಡ್ರೆ ಹಾಗೂ ಸಚಿವ ಈಶ್ವರ ಖಂಡ್ರೆ

   

ನವದೆಹಲಿ: ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ 20 ಸಾವಿರ ಹೆಕ್ಟೇರ್ ಅರಣ್ಯ ‍ಪ್ರದೇಶವನ್ನು ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಮತ್ತೆ 40 ವರ್ಷಗಳಿಗೆ ಲೀಸ್‌ ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. 

1980ರಲ್ಲಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ ಅರಣ್ಯ ಪ್ರದೇಶವನ್ನು ಲೀಸ್‌ಗೆ ನೀಡಲಾಗಿತ್ತು. 2020ರಲ್ಲಿ ಲೀಸ್‌ ಅವಧಿ ಮುಗಿದಿತ್ತು. ಮತ್ತೆ 40 ವರ್ಷಗಳಿಗೆ ಲೀಸ್‌ ನೀಡಲು ರಾಜ್ಯ ಸರ್ಕಾರ 2020ರಲ್ಲಿ ಒಪ್ಪಿಗೆ ನೀಡಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಪಡೆದಿರಲಿಲ್ಲ. ಬಳಿಕ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತರಕಾರು ಎತ್ತಿತ್ತು. ಕಾರ್ಖಾನೆ ಪರ ನಿಲುವು ತಳೆದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಜತೆಗೆ, ಕಾರ್ಖಾನೆಯ ನಿರ್ವಹಣಾ ಯೋಜನೆಗೂ ಒಪ್ಪಿಗೆ ಕೊಟ್ಟಿರಲಿಲ್ಲ. ಬೀದರ್ ಸಂಸದ ಸಾಗರ್‌ ಖಂಡ್ರೆ ಜತೆಗೂಡಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಈಶ್ವರ ಖಂಡ್ರೆ, ‘ಕೇಂದ್ರವು ಆಕ್ಷೇಪ ಕೈಬಿಟ್ಟು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು’ ಎಂದು ಕೋರಿದರು. ಈ ಕಾರ್ಖಾನೆಯು 2015ರಲ್ಲೇ ಸ್ಥಗಿತಗೊಂಡಿದೆ. 

ADVERTISEMENT

ಈ ಸಂದರ್ಭದಲ್ಲಿ ಖಂಡ್ರೆ ಅವರು ರಾಜ್ಯ ಸರ್ಕಾರಕ್ಕೆ ಬರಬೇಕಾದ ಕಾಂಪಾ ನಿಧಿ, ಪಾರಂಪರಿಕವಾಗಿ ಹೊಂದಿರುವ ವನ್ಯಜೀವಿ ಅಂಗಾಂಗವನ್ನು ಮರಳಿಸಲು ಕೊನೆಯ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತಂತೆ ಚರ್ಚಿಸಿದರು. ಕಾಂಪಾ ನಿಧಿಯಡಿ ಹೆಚ್ಚುವರಿಯಾಗಿ ₹200 ಕೋಟಿ ಮಂಜೂರು ಮಾಡುವಂತೆ ಮನವಿ ಮಾಡಿದರು. 

ನೀಲಗಿರಿ ನಿಷೇಧಕ್ಕೆ ಆಗ್ರಹ
ಅಕೇಶಿಯಾ ಮತ್ತು ನೀಲಗಿರಿ ನಿಷೇಧಿಸಲು ಆಗ್ರಹಿಸಿ ಹಾಗೂ ಸರ್ಕಾರವು ಎಂಪಿಎಂ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ವು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ‘ಮಲೆನಾಡು ಪಶ್ಚಿಮ ಘಟ್ಟಗಳ ಶ್ರೇಣಿಯ ನಿತ್ಯ ಹರಿದ್ವರ್ಣ ಕಾಡನ್ನು ಹೊಂದಿದೆ. ಇಲ್ಲಿ ಹಲವು ನದಿಗಳು ಜನ್ಮತಾಳಿವೆ. ಜೀವ ವೈವಿಧ್ಯ ಪ್ರದೇಶವಿದು. ಇಲ್ಲಿ ಪರಿಸರ ಏರುಪೇರಾದರೆ ವನ್ಯಜೀವಿಗಳು ಮಾತ್ರವಲ್ಲ ಅದು ಮಾನವ ಸಂಕುಲದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪ್ರದೇಶಗಳಲ್ಲಿ ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.