ADVERTISEMENT

ಮೂವರು ಗಣ್ಯರಿಗೆ ಫ.ಗು.ಹಳಕಟ್ಟಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:21 IST
Last Updated 3 ಜುಲೈ 2024, 14:21 IST
<div class="paragraphs"><p>ಗಾಂಧಿ ಭವನದಲ್ಲಿ ನಡೆದ&nbsp;ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಪ್ರಭಾಕರ ಕೋರೆ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ತೇಜಸ್ವಿನಿ ಅನಂತಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.&nbsp;</p></div>

ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಪ್ರಭಾಕರ ಕೋರೆ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ತೇಜಸ್ವಿನಿ ಅನಂತಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

   

ಬೆಂಗಳೂರು: ‘ಫ.ಗು.ಹಳಕಟ್ಟಿ ಅವರನ್ನು ಒಬ್ಬ ಶ್ರೇಷ್ಠ ಸಾಹಿತಿ, ವಚನ ಪಿತಾಮಹ ಎಂದು ಇವತ್ತು ಗುರುತಿಸುತ್ತಿದ್ದೇವೆ. ಆದರೆ ಆಗ ಅವರು ಅನುಭವಿಸಿದ್ದಂತಹ ಯಾತನೆಗಳನ್ನು ಗಮನಿಸಿದವರು ಕಡಿಮೆ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಫ.ಗು.ಹಳಕಟ್ಟಿ ಪ್ರತಿಷ್ಠಾನವು ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಚನ ಪಿತಾಮಹ ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕೆಎಲ್‌ಇ ಸಂಸ್ಥೆಗಳ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅದಮ್ಯ ಚೇತನ ಸಂಸ್ಥೆಯ ಮೂಲಕ ನಡೆಸುತ್ತಿರುವ ಅನ್ನದಾಸೋಹ ಕಾರ್ಯಕ್ರಮಕ್ಕಾಗಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಈ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ₹1 ಲಕ್ಷ ಒಳಗೊಂಡಿದೆ.

ADVERTISEMENT

‘ವಕೀಲರಾಗಿದ್ದ ಹಳಕಟ್ಟಿ ಅವರು ವಚನಗಳ ಸಂಗ್ರಹ ಮತ್ತು ಪರಿಷ್ಕರಣೆಗೆ ತಮ್ಮ ಕುಟುಂಬ, ವೈಯಕ್ತಿಕ ಜೀವನವನ್ನು ಮುಡಿಪಾಗಿಟ್ಟರು. ವಚನಗಳ ಸಂಗ್ರಹವನ್ನು ಪ್ರಕಟಿಸಲು ಮನೆಯನ್ನು ಮಾರಿ, ಮುದ್ರಣಾಲಯ ಆರಂಭಿಸಿದರು. ಹೀಗೆ ಬಡತನವನ್ನು ಅವರೇ ಆಹ್ವಾನಿಸಿಕೊಂಡಿದ್ದರು. ಅವರ ಕೆಲಸವನ್ನು ಮೆಚ್ಚಿ ಗೌರವಿಸುವವರು ಹಲವರಿದ್ದರು. ಆದರೆ ಅವರ ನೋವುಗಳನ್ನು ನಿವಾರಣೆ ಮಾಡುವಂತಹ ವ್ಯಕ್ತಿಗಳು ತುಂಬಾ ಕಡಿಮೆ ಇದ್ದರು’ ಎಂದು ಅವರು ನೆನಪಿಸಿಕೊಂಡರು.

ಪ್ರಭಾಕರ ಕೋರೆ ಅವರು ಮಾತನಾಡಿ, ‘ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿಒಂದೆಡೆ ಬಿಜಾಪುರದ ಆದಿಲ್‌ಶಾಹಿಯ ಒತ್ತಡ, ಮತ್ತೊಂದೆಡೆ ಮರಾಠಿ ಪೇಶ್ವೆಗಳ ಒತ್ತಡದ ಕಾರಣದಿಂದ ಕನ್ನಡಕ್ಕೆ ಜಾಗ ಇಲ್ಲದಂತೆ ಮಾಡಿದ್ದವು. ಅಂತಹ ಸಂದರ್ಭದಲ್ಲಿ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೇ, ಕನ್ನಡ ಶಾಲೆಗಳನ್ನು ಆರಂಭಿಸಿದರು. ಸಹಕಾರ ತತ್ವದಲ್ಲಿ ಬ್ಯಾಂಕ್‌ ಆರಂಭಿಸಿದರು. ಇಂದು ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆಯಾಗುತ್ತಿದೆ’ ಎಂದರು.

‘ತೇಜಸ್ವಿನಿಗೆ ಅನ್ಯಾಯ’

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ‘ತೇಜಸ್ವಿನಿ ಅನಂತಕುಮಾರ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ’ ಎಂದರು. ಇದೇ ಮಾತನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. ‘ಅವರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ. ಯಾವ ಪಕ್ಷವಾದರೂ ಸರಿ ಅವರನ್ನು ವಿಧಾನಮಂಡಲಕ್ಕೆ ಕರೆತರಬೇಕು’ ಎಂದು ಹೇಳಿದರು.

ಪಾಟೀಲರು ಮುಖಂಡರಾದರೆ ಪಕ್ಷಕ್ಕೆ ಬರುತ್ತೇನೆ: ಕೋರೆ

‘ನಮ್ಮ ಉತ್ತರ ಕರ್ನಾಟಕದ ಸುಪುತ್ರರಾದ ಎಚ್‌.ಕೆ.ಪಾಟೀಲರನ್ನು ಮುಖಂಡರ ಸ್ಥಾನದಲ್ಲಿ ನೋಡಬೇಕು ಎಂಬ ಆಸೆ ನನಗಿದೆ. ಆದರೆ ಅದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರು ಮುಖಂಡರಾದರೆ ಮತ್ತೊಮ್ಮೆ ನಿಮ್ಮ ಪಕ್ಷಕ್ಕೆ ಬರಲು ಸಮಸ್ಯೆ ಇಲ್ಲ’ ಎಂದು ಪ್ರಭಾಕರ ಕೋರೆ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.