ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಇಲ್ಲಿನ ಗೋಪಿ ಸರ್ಕಲ್ನಲ್ಲಿ ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಭಾಗಿಯಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ , ಬಿಜೆಪಿ ಮುಖಂಡ ಎಂ.ಬಿ.ಭಾನುಪ್ರಕಾಶ್ ದಿಢೀರ್ ಅಸ್ವಸ್ಥರಾಗಿ ಕುಸಿದುಬಿದ್ದು ಸಾವನ್ನಪ್ಪಿದರು.
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ಶವ ಯಾತ್ರೆ ನಡೆಸಿದ ಸ್ಥಳೀಯ ಬಿಜೆಪಿ ಮುಖಂಡರು ಕುಳಿತು ರಘುಪತಿ ರಾಘವ ರಾಜಾರಾಮ್ ಭಜನೆ ಹಾಡುತ್ತಿದ್ದರು. ಇದಕ್ಕೂ ಮುನ್ನ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಕುದುರೆ ಮೇಲೆ ಏರಿ ಬಂದು ಗಮನ ಸೆಳೆದಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಅಣುಕು ಶವ ಯಾತ್ರೆ ಕೂಡ ನಡೆಯಿತು.
ಅದರಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಭಾಷಣ ಕೂಡ ಮಾಡಿದ್ದ ಎಂ.ಬಿ.ಭಾನುಪ್ರಕಾಶ್, ಕೊನೆಯಲ್ಲಿ ಎಲ್ಲರೂ ಕುಳಿತು ಭಜನೆ ಹಾಡುವಾಗ ತೀವ್ರ ಸುಸ್ತಿನಿಂದ ಕುಸಿದು ಬಿದ್ದರು. ನೀರು ಕುಡಿಸಿ ಉಪಚರಿಸಿ ಅವರನ್ನು ತಕ್ಷಣ ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರವೇಳೆಗೆ ಸಾವನ್ನಪ್ಪಿದ್ದರು. ತೀವ್ರ ಹೃದಯಾಘಾತದಿಂದ ಭಾನುಪ್ರಕಾಶ್ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಡಂಬನೆ, ಹಾಸ್ಯ ವ್ಯಂಗ್ಯದ ಹಾದಿಯಲ್ಲಿ ಸಾಗಿದ್ದ ಬಿಜೆಪಿ ಪ್ರತಿಭಟನೆ ದಿಢೀರನೆ ನಡೆದ ಘಟನೆಯಿಂದಾಗಿ ಶೋಕಸಾಗರವಾಗಿ ಮಾರ್ಪಟ್ಟಿತು.
ಎಂ.ಬಿ.ಭಾನುಪ್ರಕಾಶ್ (69) ಅವರಿಗೆ ಪತ್ನಿ, ಪುತ್ರ ಹರಿಕೃಷ್ಣ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.