ADVERTISEMENT

ವಿಕ್ರಂ ಸಿಂಹ ಬಂಧನ: ಪ್ರತಾಪ್‌ರಿಂದ ಎಲ್ಲದಕ್ಕೂ ರಾಜಕೀಯ ಬಣ್ಣ– ಪರಮೇಶ್ವರ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:58 IST
Last Updated 31 ಡಿಸೆಂಬರ್ 2023, 15:58 IST
<div class="paragraphs"><p> ಗೃಹ ಸಚಿವ ಜಿ. ಪರಮೇಶ್ವರ </p></div>

ಗೃಹ ಸಚಿವ ಜಿ. ಪರಮೇಶ್ವರ

   

ಬೆಂಗಳೂರು: ‘ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮರ ಕಡಿದಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಯ ಹೆಸರು ಎಳೆದು ತರುವ ಅಗತ್ಯವಿಲ್ಲ. ಪ್ರತಾಪ್ ಸಿಂಹ ಎಲ್ಲದಕ್ಕೂ ಅನಾವಶ್ಯಕವಾಗಿ ರಾಜಕೀಯ ಬಣ್ಣ ಬಳಿಯುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಆರೋಪಿಸಿದರು.

‘ರಾಜಕೀಯ ಕಾರಣಕ್ಕೆ ನನ್ನ ಸಹೋದರನನ್ನು ಬಂಧಿಸಿದ್ದಾರೆ’ ಎಂದು ಮುಖ್ಯಮಂತ್ರಿ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಗೃಹ ಸಚಿವರು, ‘ವಿಕ್ರಂ ಸಿಂಹ ಅಕ್ರಮವಾಗಿ ಮರ ಕಡಿದಿರುವುದು ನಿಜ. ಕಾನೂನಿನ ಪ್ರಕಾರ ಅನುಮತಿ ಪಡೆಯದೆ ಮರ ಕಡಿಯಲಾಗಿದೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಅಥವಾ ಬೇರೆಯವರ ಪಾತ್ರ ಏನಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರತಾಪ್ ಸಿಂಹ ಎಲ್ಲದಕ್ಕೂ ರಾಜಕೀಯ ಬಣ್ಣ ಕೊಡುತ್ತಾರೆ. ಅರಣ್ಯ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬಾರದೇ’ ಎಂದೂ ಕೇಳಿದರು.

ಮಾತನಾಡದಿರುವುದೇ ಒಳ್ಳೆಯದು: ‘ಬಸವರಾಜ ರಾಯರಡ್ಡಿ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಗಂಜೀ ಕೇಂದ್ರ’ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಕುಮಾರಸ್ವಾಮಿ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು. ರಾಯರಡ್ಡಿ ಅವರಿಗೆ ಸ್ಥಾನಮಾನ ಕೊಟ್ಟಿರುವುದು ಮುಖ್ಯಮಂತ್ರಿಯ ತೀರ್ಮಾನ. ಆಡಳಿತ ನಡೆಸಬೇಕಾದರೆ ಹಣಕಾಸು ವಿಚಾರಗಳ ಬಗ್ಗೆ ಎಲ್ಲ ಮೂಲಗಳಿಂದಲೂ ಮಾಹಿತಿ ಪಡೆಯಬೇಕಾಗುತ್ತದೆ. ಹಣಕಾಸು ವಿಚಾರದಲ್ಲಿ ರಾಯರಡ್ಡಿ ಅವರಿಗೂ ಹೆಚ್ಚು ತಿಳಿವಳಿಕೆಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.