ADVERTISEMENT

ರಟ್ಟೀಹಳ್ಳಿ ಕರ್ನಾಟಕವೋ, ಪಾಕಿಸ್ತಾನದ ಭಾಗವೋ?: ಪ್ರಮೋದ ಮುತಾಲಿಕ್‌

ರಟ್ಟೀಹಳ್ಳಿಯಲ್ಲಿ ಗಣೇಶ ಮೂರ್ತಿ‌ ವಿಸರ್ಜನೆ: ಪ್ರಮೋದ ಮುತಾಲಿಕ್‌ಗೆ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 7:33 IST
Last Updated 12 ಸೆಪ್ಟೆಂಬರ್ 2024, 7:33 IST
ಪ್ರಮೋದ ಮುತಾಲಿಕ್‌
ಪ್ರಮೋದ ಮುತಾಲಿಕ್‌    

(ಸಂಗ್ರಹ ಚಿತ್ರ)

ಹಾವೇರಿ: 'ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಗುರುವಾರ ಸಂಜೆ ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ರಟ್ಟೀಹಳ್ಳಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಯವರು ನನಗೆ ನಿರ್ಬಂಧ ಹೇರಿದ್ದಾರೆ. ರಟ್ಟೀಹಳ್ಳಿ ಕರ್ನಾಟಕ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ರಟ್ಟೀಹಳ್ಳಿ ಕರ್ನಾಟಕದಲ್ಲಿ ಇದೆಯೋ ಅಥವಾ ಪಾಕಿಸ್ತಾನದ ಭಾಗವೋ' ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಪ್ರಶ್ನಿಸಿದರು.

ನಗರದಲ್ಲಿ‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಎಲ್ಲೂ ಗಲಭೆ ಆಗಿಲ್ಲ.‌ 28 ಪ್ರಕರಣಗಳಲ್ಲಿ ನಿರ್ದೋಷಿ ಆಗಿ‌ ಮುಕ್ತನಾಗಿರುವೆ. ಕೇವಲ ಎರಡು ಪ್ರಕರಣ ಬಾಕಿ ಉಳಿದಿದೆ' ಎಂದರು.

ADVERTISEMENT

'ರಟ್ಟೀಹಳ್ಳಿ ಅಂತಹ ಸಣ್ಣ ಊರಲ್ಲಿ ಏಕೆ ನಿಷೇಧ. ಈ ಸರ್ಕಾರ ಮುಸ್ಲಿಂರಿಗೆ ಕುಮ್ಮಕ್ಕು ಕೊಡುತ್ತಿದೆ' ಎಂದರು.

'ರಟ್ಟೀಹಳ್ಳಿ‌ ಪ್ರವೇಶ ನಿರ್ಬಂಧ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವೆ. ಸಂಜೆ 4 ಗಂಟೆಗೆ ಅವಕಾಶ ಸಿಕ್ಕರೆ ರಟ್ಟಿಹಳ್ಳಿ ಹೋಗುವೆ' ಎಂದರು.

'ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮುಸ್ಲಿಂ ಕಿಡಿಗೇಡಿಗಳಿಂದ ನಿನ್ನೆ ಗಲಭೆ ಆಗಿದೆ. ಶಾಂತ ರೀತಿಯಾಗಿ ಹೊರಟಿದ್ದ ಗಣೇಶ ವಿಸರ್ಜನೆ ವೇಳೆ ಮಸೀದಿ ಬಳಿ‌ ಬರುತ್ತಿದ್ದಂತೆ ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ಮಾಡಿದ್ದಾರೆ‌. ಮಸೀದಿ ಮುಂದೆ ಹೊಗಬಾರದಾ?. ಸಾರ್ವಜನಿಕ ರಸ್ತೆ ಅದು. ಯಾವ ಸೊಕ್ಕಿನ ವರ್ತನೆ ಇದು. ಇದಕ್ಕೆ ಕಾರಣ ಕಾಂಗ್ರೆಸ್. ಇವರನ್ನು ತಲೆಯ ಮೇಲೆ ಹೊತ್ತು‌ ಕುಣಿದಿದ್ದು ಅವರೇ. ಇನ್ನು‌ ಮೇಲೆ ಇಂತಹ ವರ್ತನೆಯನ್ನು ‌ಹಿಂದು ಸಮಾಜ ಸಹಿಸಲ್ಲ' ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

'ಕಳೆದ ಬಾರಿ‌ಯೂ ಅಲ್ಲಿ ಗಲಾಟೆ ನಡೆದಿತ್ತು. ಈ ಸಲ ಏಕೆ ಮುನ್ನೆಚ್ಚರಿಕೆ ವಹಿಸಲಿಲ್ಲ. ಮಂಡ್ಯದ ಉಸ್ತುವಾರಿ ಸಚಿವ ರಾಜೀನಾಮೆ ಕೊಡಬೇಕು‌. ಶಾಸಕ, ಎಸ್ಪಿ. ಜಿಲ್ಲಾಧಿಕಾರಿ ಬೇಜವಾಬ್ದಾರಿ‌ ತೋರಿದ್ದಾರೆ. ನಾಗಮಂಗಲಕ್ಕೆ ನಾಳೆ ಹೋಗುತ್ತೇನೆ. ಗಲಭೆ ಮಾಡಿದವರನ್ನು‌ ಬಹಿಷ್ಕಾರ ‌ಹಾಕುವಂತೆ ಕರೆ ನೀಡುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.