ಬೆಂಗಳೂರು: ‘ಧರ್ಮದ ಅಮಲಿನಲ್ಲಿ ಅಂಧ ಭಕ್ತರಾಗಿ ಬುದ್ಧಿಜೀವಿಗಳನ್ನು ಕೊಲ್ಲುತ್ತಾ ಹೋದರೆ ಇದಕ್ಕೆ ಕೊನೆಯೇ ಇರುವುದಿಲ್ಲ’ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಮೂವರು ಆರೋಪಿಗಳ ಜಾಮೀನು ಅರ್ಜಿಗಳಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ.
ಪ್ರಕರಣದ ಐದನೇ ಆರೋಪಿ ಅಮಿತ್ ದಿಗ್ವೇಕರ್ ಅಲಿಯಾಸ್ ಅಮಿತ್ ಅಲಿಯಾಸ್ ಪ್ರದೀಪ್ ಮಹಾಜನ್, ಏಳನೇ ಆರೋಪಿ ಎಚ್.ಎಲ್.ಸುರೇಶ್ ಅಲಿಯಾಸ್ ಟೀಚರ್ ಮತ್ತು 17ನೇ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ನವೀನ್ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಅಶೋಕ್ ನಾಯಕ್, ‘ಈ ಪ್ರಕರಣದ 11ನೇ ಆರೋಪಿ ಮೋಹನ್ ನಾಯಕ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ನಮಗೂ ಜಾಮೀನು ಮಂಜೂರು ಮಾಡಬೇಕು’ ಎಂಬ ಹಾಲಿ ಅರ್ಜಿದಾರರ ವಾದವನ್ನು ಒಪ್ಪಲು ಆಗದು. ಗೌರಿ ಹತ್ಯೆ ಪ್ರಕರಣದಲ್ಲಿ ಸಾಕಷ್ಟ್ಯು ಸಾಕ್ಷ್ಯಗಳಿವೆ’ ಎಂದರು.
‘ಇದೊಂದು ಹೀನಕೃತ್ಯ ಮತ್ತು ಇದರ ಹಿಂದೆ ಅಂತರರಾಜ್ಯ ಸಿಂಡಿಕೇಟ್ ಕೃತ್ಯವಿದೆ. ಆರೋಪಿಗಳು ಸಾಕಷ್ಟು ಸಮಯದಿಂದ ಜೈಲಿನಲ್ಲಿದ್ದಾರೆ ಎಂಬ ಅಂಶ ಜಾಮೀನು ನೀಡಿಕೆಗೆ ಮಾನದಂಡ ಆಗಬಾರದು’ ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.