ADVERTISEMENT

ಹೆದರಲು ಸಿದ್ದರಾಮಯ್ಯ ದೆವ್ವವೇ?: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 18:39 IST
Last Updated 5 ಅಕ್ಟೋಬರ್ 2024, 18:39 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ನಾನು ಭಯ ಪಡುವುದಕ್ಕೆ ಸಿದ್ದರಾಮಯ್ಯ ದೆವ್ವವೇ? ಅವರು ದೆವ್ವವಲ್ಲ. ದೆವ್ವಕ್ಕೂ ನಾನು ಹೆದರುವುದಿಲ್ಲ. ನಾನು ಹೆದರುವುದು ದೇವರು ಮತ್ತು ನಾಡಿನ ಜನರಿಗಷ್ಟೇ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಸಿದ್ದರಾಮಯ್ಯ ಅವರನ್ನು ಕಂಡರೆ ನಿಮಗೆ ಭಯವಂತೆ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನಾನು ಪಕ್ಷದಲ್ಲಿ ಕೆಲಸ ಮಾಡಿ, ಸ್ವಂತಬಲದಿಂದ ಮೇಲೆ ಬಂದಿದ್ದೇನೆ. ಆದರೆ ಸಿದ್ದರಾಮಯ್ಯ ಬೆಳೆದಿದ್ದು ದೇವೇಗೌಡ ಮತ್ತು ಜೆಡಿಎಸ್‌ ನೆರಳಿನಲ್ಲಿ. ಅದನ್ನು ಅವರು ಮರೆಯಬಾರದು. ಸ್ವಂತ ಬಲದ ನನ್ನನ್ನು ಹೆದರಿಸಲು ಯಾರಿಗೂ ಸಾಧ್ಯವಿಲ್ಲ’ ಎಂದರು.

‘ಇದರಲ್ಲಿ ಬೇರೇನೂ ಇಲ್ಲ. ಸರ್ಕಾರದ ಅಕ್ರಮಗಳ ಬಗ್ಗೆ ಮಾತನಾಡಬಾರದು ಎಂದು ಬೆದರಿಸಲೆಂದೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವೂ ಈ ಎಫ್‌ಐಆರ್‌ ಹಿಂದೆ ಇದೆ’ ಎಂದರು.

ADVERTISEMENT

ಐದೂ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ‘ಈ ಸರ್ಕಾರ ಏನು ರಾಜಕಾರಣ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಒಬ್ಬೊಬ್ಬರು ಒಂದೊಂದು ದಿನ ಒಂದೊಂದು ಮಾತನಾಡುತ್ತಿದ್ದಾರೆ. ಈ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದರು.

ಹಸ್ತಕ್ಷೇಪ ಇಲ್ಲ: ಡಿಕೆಶಿ
‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.  ‘ನನ್ನನ್ನು ಹೆದರಿಸಲು ಎಫ್ಐಆರ್‌ ದಾಖಲಿಸಲಾಗಿದೆ’ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ ‘ಅದು ಅವರ ವೈಯಕ್ತಿಕ ವಿಚಾರ. ನಾನು ಗೃಹ ಸಚಿವನಲ್ಲ ನನಗೆ ಈ ಬಗ್ಗೆ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.