ADVERTISEMENT

ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2024, 9:05 IST
Last Updated 3 ಮೇ 2024, 9:05 IST
<div class="paragraphs"><p>ಕೋವಿಶೀಲ್ಡ್ ಲಸಿಕೆ</p></div>

ಕೋವಿಶೀಲ್ಡ್ ಲಸಿಕೆ

   

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀರ್‌ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದ ಕಾರಣ ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು, ಪೋಷಕರು ಪ್ರಿಡ್ಜ್‌ನಲ್ಲಿ ಇಟ್ಟಿರುವ ನೀರು, ತಂಪು ಪಾನೀಯಗಳು ಕುಡಿಯಬಾರದು. ಐಸ್ ಕ್ರೀಮ್ ಸೇವಿಸಬಾರದು ಎಂದು ಚಿಕ್ಕಬಳ್ಳಾಪುರ ನಗರದ ಸಿದ್ದರಾಮಯ್ಯ ಕಾನೂನು ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆ ಹೊರಡಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಸ್ಪಷ್ಟನೆ ನೀಡಿದೆ.

ADVERTISEMENT

ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಮ್ಮ ಪೋಷಕರಿಗೆ ಮತ್ತು ಇತರರಿಗೂ ತಿಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿತ್ತು.

ಇನ್ನೂ ಎರಡು ತಿಂಗಳು ಬೇಸಿಗೆ ಹೆಚ್ಚಾಗುತ್ತದೆ. ಆ ಕಾರಣದಿಂದ ಎಲ್ಲರೂ ತಲೆಗೆ ಟೋಪಿ ಅಥವಾ ಬಟ್ಟೆ ಧರಿಸಬೇಕು. ಛತ್ರಿ ಹಿಡಿದು ಓಡಾಡಬೇಕು. ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತ ತಮ್ಮ ಪೋಷಕರು ಮತ್ತು ಇತರರಿಗೆ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.

ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳು ತಣ್ಣನೆಯ ನೀರು ಕುಡಿಯುತ್ತಿದ್ದರು. ಐಸ್ ಕ್ರೀಂ ಸೇವಿಸುತ್ತಿದ್ದರು. ಬಿಸಿಲ ಕಾರಣ ರಕ್ತದೊತ್ತಡ ದಿಢೀರ್ ಕುಸಿಯುವ ನಿದರ್ಶನಗಳು ಇವೆ. ಈ ವಿಚಾರದಲ್ಲಿ ಜಾಹೀರಾತು ಸಹ ನೋಡಿದ್ದೆವು‌. ವಿದ್ಯಾರ್ಥಿಗಳು ಮತ್ತು ನಮ್ಮ ಸಿಬ್ಬಂದಿ ಹಿತದೃಷ್ಟಿಯಿಂದ ಈ ತಿಳಿವಳಿಕೆಯ ಪ್ರಕಟಣೆ ಹೊರಡಿಸಲಾಗಿದೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ ‘ಪ್ರಜಾವಾಣೆ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.