ADVERTISEMENT

ರಸ್ತೆ ಮಾರ್ಗದ ಸ್ವರೂಪದ ಬಗ್ಗೆ ನಿರ್ದೇಶನ ಕೊಡಲಾಗದು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 15:50 IST
Last Updated 29 ಏಪ್ರಿಲ್ 2024, 15:50 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿನ್ಯಾಸ ಮತ್ತು ಯೋಜನೆ ರೂಪಿಸುವುದು ಅಧಿಕಾರಿ ವರ್ಗದ ಕರ್ತವ್ಯ. ಅವುಗಳ ಮಾರ್ಗ (ಅಲೈನ್‌ಮೆಂಟ್‌) ಹೇಗಿರಬೇಕೆಂಬ ಬಗ್ಗೆ ಕೋರ್ಟ್‌ಗಳು ಯಾವುದೇ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

‘ರಾಷ್ಟ್ರೀಯ ಹೆದ್ದಾರಿಯನ್ನು ನಮ್ಮ ಜಮೀನಿನಲ್ಲಿ ಹಾದು ಹೋಗುವಂತೆ ನಿರ್ಮಿಸಲಾಗುತ್ತಿದೆ’ ಎಂದು ಆಕ್ಷೇಪಿಸಿ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕೃಷಿಕ ಈರಣ್ಣ ಮತ್ತು ಸಿದ್ದರಾಮೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ರಸ್ತೆಗಳ ಅಭಿವೃದ್ಧಿ, ಅವುಗಳ ಆಳ, ಅಗಲ, ಉದ್ದ ಮತ್ತು ಅದರ ವಿನ್ಯಾಸ ಮತ್ತಿತರ ಅಂಶಗಳನ್ನು ಅಧಿಕಾರಿ ವರ್ಗ ನಿರ್ಧರಿಸುತ್ತದೆ. ಮೂಲತಃ ಅದು ಆಯಾ ಕ್ಷೇತ್ರ ಪರಿಣತರ ಕೆಲಸ. ಹೀಗಾಗಿ, ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲಾಗದು’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿಯಲ್ಲಿ ಏನಿತ್ತು?: ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಮ್ಮ ಕೃಷಿ ಭೂಮಿಯಲ್ಲಿ ಹಾದು ಹೋಗುವಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಮುಂದಾಗಿದೆ. ಈ ಮಾರ್ಗವನ್ನು ತಪ್ಪಾಗಿ ಯೋಜಿಸಲಾಗಿದೆ ಮತ್ತು ಇದು ಯೋಜನೆಯ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ರಸ್ತೆ ಅಭಿವೃದ್ಧಿ ಯೋಜನೆಯ ಮಾರ್ಗ ಬದಲಿಸುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.