ಬೆಂಗಳೂರು: 'ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಸಿದ್ಧಪಡಿಸುವಾಗ ನಮ್ಮ (ಸಚಿವರು) ಅಭಿಪ್ರಾಯವನ್ನು ಯಾರೂ ಕೇಳಿಲ್ಲ' ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, 'ಒಂದೆರಡು ಹೆಸರು ಕೊಡಿ ಎಂದಾಗ ಕೊಟ್ಟಿದ್ದೇವೆ. ಆದರೆ, ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ' ಎಂದರು.
'ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು' ಎಂದು ಹೇಳಿದರು.
'ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ನಾಯಕರ ಜತೆ ಮಾತನಾಡಿ ಪಟ್ಟಿ ಮಾಡಬೇಕು. ಅದರೆ, ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ' ಎಂದರು.
'ನಾನು ಸಹ ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರೆಲ್ಲ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
'ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇವತ್ತು ನಡೆಯುತ್ತಿದೆ. ಕಳೆದ ಬಾರಿ ರೀತಿ ಆಗದಂತೆ ಈ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ' ಎಂಬ ವಿಶ್ವಾಸವಿದೆ ಎಂದರು.
'ಕಳೆದ ಬಾರಿ ಅಕ್ರಮದ ಕುರಿತು ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರ ಆಯೋಗದ ವರದಿ ಕೊಟ್ಟಿದೆ. ನಾನು ಅ ವರದಿಯನ್ನು ನೋಡಿಲ್ಲ. ಮುಖ್ಯಮಂತ್ರಿಗೆ ನೀಡಿದ್ದಾರೆ. ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಮುಖ್ಯಮಂತ್ರಿ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ. ಅಕ್ರಮದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರು ಸಮಿತಿಯು ವಿಚಾರಣೆ ವೇಳೆ ಕರೆದಾಗ ಹೋಗಿರಲಿಲ್ಲ. ಅದು ಯಾವ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ನಿರ್ಧಾರ ಏನು ಮಾಡು ಎಂಬುದನ್ನು ತೀರ್ಮಾನಿಸುತ್ತೇವೆ' ಎಂದು ಹೇಳಿದರು.
'ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೊ ಪಾದ ಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆ ವಾತಾವರಣ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದು ಪಾದಯಾತ್ರೆಯ ಉದ್ದೇಶ. ಅದು ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಅದು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಶಾಂತಿ ಸಂದೇಶ ಸಾರಲು ನಡೆಸುತ್ತಿದ್ದಾರೆ. ಅದರೆ, ಅಸ್ಸಾಂ ಮುಖ್ಯಮಂತ್ರಿ ಬೇಕಂತಲೇ ಅಡ್ಡಿ ಪಡಿಸುತ್ತಿದ್ದಾರೆ' ಎಂದು ದೂರಿದರು.
'ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆಯನ್ನು ತಡೆಯುವುದು, ಯಾತ್ರಿಗಳ ಮೇಲೆ ಗಲಾಟೆ ಮಾಡುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಅಗುತ್ತಿರಬಹುದು ಅನ್ನಿಸುತ್ತದೆ. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ. ರಾಹುಲ್ ಗಾಂಧಿಗೆ ಹೀಗೆ ಆದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಹೀಗಾಗಿ ದೇಶ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ' ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದರು.
'ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು. ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.