ADVERTISEMENT

ಜೆಡಿಎಸ್‌ನಿಂದ ಇಬ್ರಾಹಿಂ, ಸಿ.ಕೆ. ನಾನು ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 16:42 IST
Last Updated 9 ಡಿಸೆಂಬರ್ 2023, 16:42 IST
<div class="paragraphs"><p>ಜೆಡಿಎಸ್‌</p></div>

ಜೆಡಿಎಸ್‌

   

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿದ್ದ ಸಿ.ಎಂ. ಇಬ್ರಾಹಿಂ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾನು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಶನಿವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಉಚ್ಚಾಟನೆ ನಿರ್ಧಾರ ಪ್ರಕಟಿಸಿದರು.

ADVERTISEMENT

‘ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆಗಿನ ಮೈತ್ರಿ ನಿರ್ಧಾರವನ್ನು ಅವರಿಬ್ಬರ ಸಮ್ಮುಖದಲ್ಲಿಯೇ ಕೈಗೊಳ್ಳಲಾಗಿತ್ತು. ಆದರೆ,  ನಂತರದ ದಿನಗಳಲ್ಲಿ ಈ ಇಬ್ಬರೂ ಮೈತ್ರಿಯನ್ನು ವಿರೋಧಿಸಿದರು. ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರ ನಡೆಸಿದರು. ಇದರಿಂದ ಪಕ್ಷದ ವರ್ಚಸ್ಸು, ಹಿತಕ್ಕೆ ಧಕ್ಕೆಯಾಗಿದೆ. ಪಕ್ಷ ವಿರೋಧಿ ಚಟುವಟಿಕೆಯ ಕಾರಣಕ್ಕೆ ಉಚ್ಚಾಟನೆಯ ನಿರ್ಧಾರ ತೆಗೆದುಕೊಳ್ಳಲಾಯಿತು‘ ಎಂದು ಅವರು ವಿವರಿಸಿದರು. 

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ, ಪುನೀತ್‌ಕುಮಾರ್‌ ಸಿಂಗ್ (ಪಶ್ಚಿಮ ಬಂಗಾಳ), ಜೋರಾ ಸಿಂಗ್ (ಹರಿಯಾಣ), ಅವತಾರ್‌ ಸಿಂಗ್‌ (ಪಂಜಾಬ್‌), ರಾಮ್‌ರತನ್‌ ಶರ್ಮ (ಜಮ್ಮು ಮತ್ತು ಕಾಶ್ಮೀರ), ಹರ್‌ಜಿತ್ ಸಿಂಗ್‌ (ಉತ್ತರಾಖಂಡ), ನರೇಂದ್ರ ಸಿಂಗ್‌ ಹರಿದಾಸ್‌ ಕಂತಾರಿಯಾ (ಮಹಾರಾಷ್ಟ್ರ), ಶಾ ಗಣಪತಿ ಭಾಯ್‌ (ಗುಜರಾತ್‌), ಹಲ್ದಾರ್‌ ಕಾಂತ್‌ ಮಿಶ್ರಾ (ಬಿಹಾರ), ಕೆ.ಎಂ. ಪೊನ್ನುಸ್ವಾಮಿ (ತಮಿಳುನಾಡು), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್‌. ಶಿವಕುಮಾರ್‌, ಜಪ್ರುಲ್ಲಾ ಖಾನ್ ಭಾಗವಹಿಸಿದ್ದರು.  

ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್, ಶಾಸಕ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ಉನ್ನತ ನಾಯಕರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌, ಎಚ್.ಕೆ. ಕುಮಾರಸ್ವಾಮಿ, ವೆಂಕಟರಾವ್‌ ನಾಡಗೌಡ, ಲೀಲಾದೇವಿ ಆರ್‌. ಪ್ರಸಾದ್ ಕೂಡಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.